ಸಡಗರ ಸಂಭ್ರಮದಿಂದ ನಡೆದ ಶ್ರೀರಾಮ ನವಮಿ ಆಚರಣೆ
ವಿಜಯ ದರ್ಪಣ ನ್ಯೂಸ್…
ಸಡಗರ ಸಂಭ್ರಮದಿಂದ ನಡೆದ ಶ್ರೀರಾಮ ನವಮಿ ಆಚರಣೆ
ಶಿಡ್ಲಘಟ್ಟ ,ಚಿಕ್ಕಬಳ್ಳಾಪುರ ಜಿಲ್ಲೆ : ತಾಲ್ಲೂಕಿನಾಧ್ಯಂತ ಸಡಗರ ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಶ್ರೀರಾಮ ನವಮಿಯನ್ನು ಆಚರಿಸಲಾಯಿತು,ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿನ ದೇವಾಲಯಗಳಲ್ಲಿ ಶ್ರೀರಾಮ ನವಮಿಯ ಪ್ರಯುಕ್ತ ವಿಶೇಷ ಪೂಜೆ ಮಾಡಿ ಮಹಾ ಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಮುಖ್ಯವಾಗಿ ಹೆಸರು ಬೇಳೆ ಹಾಗೂ ಪಾನಕವನ್ನು ಪ್ರಸಾದವನ್ನಾಗಿ ಎಲ್ಲಾ ಕಡೆಯೂ ಭಕ್ತರಿಗೆ ಹಂಚಲಾಯಿತು. ಭಕ್ತರು ಟ್ರಾಕ್ಟರ್ ಹಾಗು ಟಿಲ್ಲರ್ ವಾಹನಗಳಲ್ಲಿ ದೊಡ್ಡ ದೊಡ್ಡ ಕೊಳಗಗಳ ತಂಬಾ ಹೆಸರು ಬೇಳೆ, ಬೆಲ್ಲದ ಪಾನಕ ಮಾಡಿಸಿ ದೇವಾಲಯಗಳ ಮುಂದಿರಿಸಿ ದೇವಾಲಯಕ್ಕೆ ಬರುವ ಹಾಗೂ ರಸ್ತೆಗಳಲ್ಲಿ ಸಾಗುವವರನ್ನು ಕರೆದು ಹಂಚಿದರು.
ಶ್ರೀರಾಮ, ಸೀತೆ, ಲಕ್ಷ್ಮಣ ಹಾಗು ಶ್ರೀಆಂಜನೇಯಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜಿಸಲಾಯಿತು ಬಹುತೇಕ ರಾಮನ ದೇವಾಲಯಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದವು ರಾಮನಾಮ ಜಪ ಮುಗಿಲು ಮುಟ್ಟಿತ್ತು.
ನಗರದ ಕೋಟೆ ಶ್ರೀಆಂಜನೇಯಸ್ವಾಮಿ, ಮಯೂರ ವೃತ್ತದ ಆಂಜನೇಯಸ್ವಾಮಿ, ಇದ್ದೂಡು ಮಾರ್ಗದ ಗಾಂಧಿನಗರದಲ್ಲಿನ ಮುನೇಶ್ವರಸ್ವಾಮಿ, ಆಂಜನೇಯಸ್ವಾಮಿ ದೇವಾಲಯ, ಚಿಂತಾಮಣಿ ಮಾರ್ಗದ ವೀರಾಂಜನೇಯಸ್ವಾಮಿ, ಅಪ್ಪೇಗೌಡನಹಳ್ಳಿ ಗೇಟ್ ನ ಬಯಲಾಂಜನೇಯಸ್ವಾಮಿ, ಚೌಡಸಂದ್ರದ ಶ್ರೀಪ್ರಸನ್ನಾಂಜನೇಯಸ್ವಾಮಿ,ಮೇಲೂರಿನ ಆಂಜನೇಯಸ್ವಾಮಿ, ವೀರಾಪುರದ ವೀರಾಂಜನೇಯಸ್ವಾಮಿ,ದೊಡ್ಡದಾಸರಹಳ್ಳಿಯ ಶ್ರೀಮುತ್ತಾಂಜನೇಯಸ್ವಾಮಿ,ತಿಮ್ಮನಾಯಕನಹಳ್ಳಿಯ ರಾಮನಗುಡಿ ಸೇರಿದಂತೆ ನಾನಾ ಕಡೆ ವಿಜೃಂಭಣೆಯಿಂದ ಶ್ರೀರಾಮನವಮಿಯನ್ನು ಆಚರಿಸಲಾಯಿತು.
ಶಿಡ್ಲಘಟ್ಟ ತಾಲ್ಲೂಕಿನ ಚೌಡಸಂದ್ರ ಗ್ರಾಮದಲ್ಲಿ ನಲೆಸಿರುವ ವ್ಯಾಸರಾಯರ ಕಾಲದ ಸುಪ್ರಸಿದ್ಧ ಶ್ರೀಆಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಒಂದು ದಿನದ ಅಖಂಡ ರಾಮಕೋಟಿ ಏರ್ಪಡಿಸಲಾಗಿತ್ತು.
ಪೂಜಾ ಕೈಂಕರ್ಯಗಳನ್ನು ಕೈಗೊಂಡು ರಾಮಕೋಟಿ ರಾಮನಾಮವನ್ನು ಪಠಿಸಲು ಗ್ರಾಮ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಭಕ್ತಾದಿಗಳು ಭಾಗವಹಿಸಿದ್ದು , ಪಕ್ಕ ವಾದ್ಯ ಹಾಗು ಭಜನಾ ತಂಡದೊಂದಿಗೆ ರಾಮಕೋಟಿ ಭಜನೆಯು ಶ್ರದ್ದಾ ಭಕ್ತಿಯಿಂದ ನಡೆಯಿತು.
ಶ್ರಿರಾಮ ನವಮಿ ಹಾಗು ರಾಮಕೋಟಿ ಪ್ರಯುಕ್ತ ಮೂಲ ದೇವರ ವಿಗ್ರಹಕ್ಕೆ ಹೂವಿನ ಅಲಂಕಾರ ಹಾಗು ನೂತನ ದೇವರ ವಿಗ್ರಹದ ಸ್ವಾಮಿಗೆ 15 ಕೆ.ಜಿ. ಬೆಣ್ಣೆಯನ್ನು ಬಳಸಿ ವಿಶೇಷ ಅಲಂಕಾರವನ್ನು ಅರ್ಚಕ ವೇಣುಗೋಪಾಲಚಾರ್ ಹಾಗು ಶ್ಯಾಮ್ ಸುಂದರ್ ಸ್ವಾಮಿ ಅವರ ತಂಡದಿಂದ ಮಾಡಲಾಗಿತ್ತು,ಮಹಾಮಂಗಳಾರತಿ ತೀರ್ಥ,ಪ್ರಸಾದ ಸೇವೆಗಳು ಹಾಗು ಬೆಲ್ಲದ ಪಾನಕ ,ಹೆಸರು ಬೇಳೆ ,ಕೋಸಂಬರಿ ಮಜ್ಜಿಗೆ,ವಿತರಿಸಲಾಯಿತು,ಭಕ್ತಾದಿಗಳು ಸ್ವಾಮಿಯ ದರ್ಶನ ಪಡೆದು ಪುನೀತರಾದರು.
ಚಿಂತಾಮಣಿ ರಸ್ತೆಯಲ್ಲಿರುವ ಶ್ರೀ ವೀರಾಂಜನೇಯ ದೇವಾಲಯದಲ್ಲಿ ಶ್ರೀ ವೀರಾಂಜನೇಯಸ್ವಾಮಿ ಬಲಿಜ ಸೇವಾ ಟ್ರಸ್ಟ್ ವತಿಯಿಂದ ಇಲ್ಲಿ ಹಾಲು ಉಟ್ಲು ಹಾಲನ್ನು ಮಡಿಕೆಯಲ್ಲಿ ಕಟ್ಟಿ ಪೂಜಿಸಿ ಒಡೆಯುತ್ತಾರೆ ವಿಶೇಷವಾಗಿ ನಡೆಯುತ್ತದೆ ಹಾಗು ಮನರಂಜನಾ ಉಟ್ಲು ಪರಿಷೆ ಆಕರ್ಷಣೀಯವಾಗಿ ನೆರವೇರಿತು.