ಸ್ಕೀಂ ಹೆಸರಲ್ಲಿ ಹಣ ಸಂಗ್ರಹ : ಐವರು ಆರೋಪಿಗಳು ಲಾಕ್.

ವಿಜಯ ದರ್ಪಣ ನ್ಯೂಸ್…

ಸ್ಕೀಂ ಹೆಸರಲ್ಲಿ ಹಣ ಸಂಗ್ರಹ : ಐವರು ಆರೋಪಿಗಳು ಲಾಕ್.

 

ಕೊಡಗು : ಇತ್ತೀಚಿನ ದಿನಗಳಲ್ಲಿ ರಾಜ್ಯ ಹಾಗೂ ಕೊಡಗು ಜಿಲ್ಲೆಯ ಹಲವೆಡೆ ಬೆನಿಫಿಟ್ ಸ್ಕೀಮ್, ಲಕ್ಕಿ ಲಾಟರಿ ಹೆಸರಿನಲ್ಲಿ ವಂಚಕರು ಹಣ ಸಂಗ್ರಹಿಸಿ ಕೊನೆಗೆ ಇತ್ತ ಬಹುಮಾನವನ್ನು ಅಥವಾ ಕಟ್ಟಿದ ಕಂತಿನ ಹಣವನ್ನು ನೀಡದೆ ಗ್ರಾಹಕರಿಗೆ ಪಂಗನಾಮ ಹಾಕಿ ಅತ್ತ ಹಣದ ಕಂತೆಯೊಂದಿಗೆ ಪರಾರಿ ಆಗುತ್ತಿರುವ ವಂಚನೆಯ ಪ್ರಕರಣಗಳು ನಡೆಯುತ್ತಲೇ ಇವೆ. ಈ ನಡುವೆ ಮಡಿಕೇರಿ ಪೊಲೀಸರು ಕಾರ್ಯಾಚರಣೆ ನಡೆಸಿ, ಯಾವುದೇ ಅಧಿಕೃತ ದಾಖಲಾತಿಗಳನ್ನು ಹೊಂದದೆ, ಜನರನ್ನು ವಂಚಿಸುವ ಉದ್ದೇಶದಿಂದ ಸ್ಕೀಮ್ ಹೆಸರಿನಲ್ಲಿ ಗ್ರಾಹಕರಿಂದ ಹಣವನ್ನು ಸಂಗ್ರಹಿಸುತ್ತಿದ್ದ ಐವರು ಆರೋಪಿಗಳನ್ನು ಬಂಧಿಸುವ ಮೂಲಕ ಕಂತಿನ ಹಣ ಕಟ್ಟಿದವರು ಮೋಸ ಹೋಗದಂತೆ ಮುನ್ನೆಚ್ಚರಿಕೆ ವಹಿಸಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಣಿಪೇಟೆಯಲ್ಲಿ ದಿನಾಂಕ 30-01-2025 ರಿಂದ SV SMART VISION ಎಂಬ ಹೆಸರಿನಲ್ಲಿ ಮಡಿಕೇರಿ ನಗರ ನಿವಾಸಿಗಳಾದ ಅಶ್ರಫ್, ಸುಲೈಮಾನ್, ಅಬ್ದುಲ್ ಗಫೂರ್, ಆಕ್ರಮ್ ಹಾಗೂ ಕಿಶೋರ್ ಎಂಬುವರು ಹಣವನ್ನು ಸಂಗ್ರಹಿಸುತ್ತಿದ್ದರು. ಈ ಸ್ಕಿಮ್ ನಲ್ಲಿ ಈಗಾಗಲೇ 1100 ಕ್ಕೂ ಹೆಚ್ಚು ಜನರು ಸೇರ್ಪಡೆಗೊಂಡಿದ್ದಾರೆ.

ಈ ಸ್ಕೀಂ ಗೆ ಸೇರಲು ಒಬ್ಬರು ಪ್ರತಿ ತಿಂಗಳು ರೂ. 1,000/- ರಂತೆ ಒಟ್ಟು 24 ಕಂತುಗಳನ್ನು ಗ್ರಾಹಕರು ಕಟ್ಟಬೇಕಾಗಿರುತ್ತದೆ. ಪ್ರತಿ ತಿಂಗಳ 30 ನೇ ತಾರೀಕಿನಂದು ಸಂಜೆ 05 ಘಂಟೆಗೆ ರಾಣಿಪೇಟೆಯಲ್ಲಿರುವ ಗೆಜ್ಜೆಸಂಗಪ್ಪ ಕಲ್ಯಾಣ ಮಂಟಪದಲ್ಲಿ ಲಕ್ಕಿ ಡ್ರಾ ಮಾಡಿ ಫಲಿತಾಂಶವನ್ನು ವಾಟ್ಸ್ ಆಪ್ ಗ್ರೂಪ್ ಮೂಲಕ ತಿಳಿಸಿ ಬಹುಮಾನವನ್ನು 50-60 ದಿನಗಳಲ್ಲಿ ಗ್ರಾಹಕರಿಗೆ ನೀಡಲಾಗುವುದು. 20 ತಿಂಗಳ ಲಕ್ಕಿ ಡ್ರಾನಲ್ಲಿ ಒಟ್ಟು 96 ಜನರಿಗೆ ವಿವಿಧ ರೀತಿಯ ಬಹುಮಾನವನ್ನು ನೀಡುವುದಾಗಿ ಪ್ರಚುರಪಡಿಸಿದ್ದರು.

ಮೊದಲನೇ ತಿಂಗಳ ಬಹುಮಾನವಾಗಿ ಒಬ್ಬರಿಗೆ ಥಾರ್ ಜೀಪ್ ಹಾಗೂ 8 ಜನರಿಗೆ ಬೈಕ್ ನೀಡಬೇಕಾಗಿತ್ತು. ಆದರೆ ಥಾರ್ ಜೀಪ್ ಬದಲಾಗಿ ರೂ.7,60,000/- ಮತ್ತು 07 ಜನರಿಗೆ ರೂ. 43,000/- ಗಳ ಚೆಕ್ ಅನ್ನು ನೀಡಿದ್ದಾರೆ.

SV SMART VISION ರವರು ಯಾವುದೇ ಅಧಿಕೃತ ದಾಖಲಾತಿಗಳನ್ನು ಹೊಂದದೆ, ವಂಚನೆ ಮಾಡುವ ಉದ್ದೇಶದಿಂದ ಗ್ರಾಹಕರಿಂದ ಹಣವನ್ನು ಸಂಗ್ರಹಿಸುತ್ತಿದ್ದ ಸ್ಟೀಮಿನ ಪ್ರತಿನಿಧಿಗಳಾದ ಅಶ್ರನ್, ಸುಲೈಮಾನ್, ಅಬ್ದುಲ್ ಗಫೂರ್, ಅಕ್ರಮ್ ಹಾಗೂ ಕಿಶೋರ್ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ DA, : 21(1)(2) BUDS Act & 318(4), 3(5), BNS-2023 ರಂತೆ ಪ್ರಕರಣ ದಾಖಲಿಸಲಾಗಿರುತ್ತದೆ.

ಪ್ರಕರಣದ ತನಿಖೆಯನ್ನು ಕೈಗೊಂಡ ಮಡಿಕೇರಿ ಉಪವಿಭಾಗದ ಡಿ ಎಸ್ ಪಿ ಸೂರಜ್ ಪಿ. ಎ., ಮಡಿಕೇರಿ ನಗರ ಪೊಲೀಸ್ ವೃತ್ತ, ನಿರೀಕ್ಷಕರಾದ ರಾಜು.ಪಿ.ಕೆ., ಸಬ್ ಇನ್ಸ್ ಪೆಕ್ಟರ್ ಗಳಾದ ಶ್ರೀಧರ ಸಿ.ಎ. ಮತ್ತು ರಾಧ ಹಾಗೂ ಅಪರಾಧ ಪತ್ತೆ ಸಿಬ್ಬಂದಿಗಳು ಮಾಹಿತಿ ಸಂಗ್ರಹಿಸಿ ದಿನಾಂಕ: 15-02-2025 ರಂದು 05 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಆರೋಪಿಗಳ ವಿವರ:

1) ಮಹಮ್ಮದ್ ಆಶ್ರಫ್, 37 ವರ್ಷ, ಸೂರತ್ಕಲ್, ಕೃಷ್ಣಪುರ, 6 ನೇ ಬ್ಲಾಕ್, ಮಂಗಳೂರು.

2) ಸುಲೈಮಾನ್ ಎಂ.ವೈ. 37 ವರ್ಷ, ಮಲ್ಲಿಕಾರ್ಜುನ ನಗರ, ಮಡಿಕೇರಿ.

3) ಅಬ್ದುಲ್ ಗಫೂರ್, 34 ವರ್ಷ, ತ್ಯಾಗರಾಜ ಕಾಲೋನಿ, ಮಡಿಕೇರಿ,

4) ಮೊಹಮ್ಮದ್ ಅಕ್ರಂ, 34 ವರ್ಷ, ತ್ಯಾಗರಾಜ ಕಾಲೋನಿ, ಮಡಿಕೇರಿ.

5) ಕಿಶೋರ್ ಹೆಚ್.ಎನ್. 41 ವರ್ಷ, ಕುಂಬಳಕೇರಿ ಉಕ್ಕುಡ, ಮಡಿಕೇರಿ.

SV SMART VISION ಎಂಬ ಹೆಸರಿನ ಸ್ವೀಮ್‌ನಲ್ಲಿ ಹಣವನ್ನು ಹೂಡಿಕೆ ಮಾಡಿ ವಂಚನೆಗೆ ಒಳಗಾದವರು ಸೂಕ್ತ ದಾಖಲಾತಿಗಳೊಂದಿಗೆ ಮಡಿಕೇರಿ ನಗರ ಪೊಲೀಸ್ ಠಾಣೆಗೆ ಹಾಜರಾಗುವಂತೆ ಪೊಲೀಸ್ ಪ್ರಕಟಣೆಯಲ್ಲಿ ಕೋರಲಾಗಿದೆ.