ಈ ಸಮಾಜ ಹಾಳಾಗಲು ಕೇವಲ ಕೆಟ್ಟವರು ಮಾತ್ರ ಕಾರಣವಲ್ಲ ಒಳ್ಳೆಯವರ ಮೌನವೂ ಕಾರಣ “

ವಿಜಯ ದರ್ಪಣ ನ್ಯೂಸ್

ಈ ಸಮಾಜ ಹಾಳಾಗಲು ಕೇವಲ ಕೆಟ್ಟವರು ಮಾತ್ರ ಕಾರಣವಲ್ಲ ಒಳ್ಳೆಯವರ ಮೌನವೂ ಕಾರಣ “

ಜಗತ್ತಿನ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದು ಕರೆಯಲಾಗುವ ಆಲ್ಬರ್ಟ್ ಐನ್ ಸ್ಟೈನ್ ಅವರ ಮಾತುಗಳಿವು. ಆ ಅನುಭವದ ಅನಿಸಿಕೆಯ ಹಿನ್ನೆಲೆಯಲ್ಲಿ……

ಸಮಾಜ ಬದಲಾಗಬೇಕು ನಿಜ,
ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು.?

ಸಾಮಾಜಿಕ ಜಾಲತಾಣಗಳಲ್ಲಿ ಬರೆದ ಮಾತ್ರಕ್ಕೆ ಕ್ರಾಂತಿ ಆಗುತ್ತದೆಯೇ ?

ಬಹಳಷ್ಟು ಮಹಾನುಭಾವರೇ ವಿಫಲವಾಗಿರುವಾಗ ನಿಮ್ಮಿಂದ ನಮ್ಮಿಂದ ಸಾಧ್ಯವೇ ?

ಎಲ್ಲವೂ ಹೇಳೋಕೆ, ಕೇಳೋಕೆ ಚೆಂದ. ಆದರೆ ವಾಸ್ತವ ಅಳವಡಿಕೆ ಅಸಾಧ್ಯ. !

ಶ್ರೀಮಂತರಿಗೆ ಬದಲಾವಣೆ ಅಗತ್ಯವಿಲ್ಲ. ಬಡವರಿಗೆ ಬದಲಾಯಿಸುವ ಶಕ್ತಿ ಇಲ್ಲ. !

ನಮ್ಮ ಜನ ಬದಲಾಗದೆ ಏನೂ ಮಾಡಲು ಸಾಧ್ಯವಿಲ್ಲ. !

ಮೊದಲು ನೀವು ಬದಲಾಗಿ,
ಆಮೇಲೆ ಬೇರೆಯವರ ಬಗ್ಗೆ ಮಾತನಾಡಿ.!

ಎಲ್ಲ ಎಲ್ಲವನರಿತು ಫಲವೇನು,
ತನ್ನ ತಾ ಅರಿಯಬೇಕಲ್ಲವೇ !

ಲೋಕದಾ ಡೊಂಕ ನೀವೇಕೆ ತಿದ್ದುವಿರು,
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ,
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ !

ಎಲ್ಲರೂ ಕಳ್ಳರು, ಎಲ್ಲರೂ ಭ್ರಷ್ಟರು, ಹಾಗಾದರೆ ಬದಲಾವಣೆ ಮಾಡುವುದು ಯಾರನ್ನು.?

ಬದಲಾವಣೆ ಒಂದು ಕನಸು ಭ್ರಮೆ. ಸುಮ್ಮನೆ ಬೇರೆ ಕೆಲಸ ನೋಡಿಕೊಳ್ಳಿ. !

ಜನ ಬದಲಾದರೆ ಸಮಾಜ ತನ್ನಿಂದ ತಾನೇ ಬದಲಾಗುತ್ತದೆ. !

ಸಮಾಜ ಬದಲಾಗಬೇಕಾದರೆ ಮೊದಲು ಜನ ಬದಲಾಗಬೇಕು. !

ಒಳ್ಳೆಯ ಸರ್ಕಾರದಿಂದ ಮಾತ್ರ ಬದಲಾವಣೆ ತರಲು ಸಾಧ್ಯ. !

ಸರ್ಕಾರ ಒಳ್ಳೆಯದು ಬರಬೇಕಾದರೆ ಮೊದಲು ಜನ ಬದಲಾಗಬೇಕು. !

ಹೌದು,
ಈ ರೀತಿಯ ಚರ್ಚೆಗಳು ದಿನನಿತ್ಯ ನಿರಂತರವಾಗಿ ಆಗುತ್ತಲೇ ಇದೆ.

ಸ್ವಲ್ಪ ಮಟ್ಟಿಗೆ ಉತ್ತರಗಳೂ ಸಿಗಬಹುದು.

ಅನೇಕರು ಅನೇಕ ರೀತಿಯಲ್ಲಿ ವ್ಯಾಖ್ಯಾನಿಸಬಹುದು.

ಬದಲಾವಣೆ ಒಪ್ಪದ ಜನ ಇನ್ನೂ ಅನೇಕ ರೀತಿಯಲ್ಲಿ ವೇದಾಂತಗಳನ್ನು ಉವಾಚಿಸಿ ನಮ್ಮ ಬಾಯಿ ಮುಚ್ಚಿಸಬಹುದು !

ಹಾಗೆಂದು ಸುಮ್ಮನೆ ಇರುವುದು ಉಚಿತವೇ ?

ಯಥಾಸ್ಥಿತಿ ಒಪ್ಪಿಕೊಂಡು ಸುಮ್ಮನೆ ಕುಳಿತುಕೊಳ್ಳಬೇಕೆ ?

ವ್ಯವಸ್ಥೆಯ ಲಾಭ ಪಡೆಯುತ್ತಿರುವ ಶೋಷಕರ ಶೋಷಣೆ ಪ್ರಶ್ನಿಸಬಾರದೆ ?

ಕನಿಷ್ಠ ನಮ್ಮ ಪ್ರಯತ್ನ ಮಾಡಬಾರದೆ‌ ?

ಆದರೆ ವಾಸ್ತವ. ?

ನಮ್ಮ ಮನಗಳಲ್ಲಿ,
ನಮ್ಮ ಮನೆಗಳಲ್ಲಿ,
ನಮ್ಮ ಮತಗಳಲ್ಲಿ.
ಬದಲಾವಣೆಯಾಗಬೇಕಿದೆ.

ಆಗ ನಮ್ಮೆಲ್ಲರ ಕನಸಿನ ಸಮ ಸಮಾಜದ ಕನಸು ಸಾಧ್ಯವಾಗಬಹುದು.

ಜನರ ಜೀವನಮಟ್ಟ ಸುಧಾರಣೆಯಾಗಬಹುದು.

ಅದಕ್ಕಾಗಿ ನಾವು ಮಾಡಬೇಕಾದ ಮೊದಲನೆಯ ಕೆಲಸ ಸಂಘಟನೆ ಅಥವಾ ಒಂದು ಗೂಡುವುದು.

ನಮ್ಮ ಮನಸ್ಸುಗಳನ್ನು ಜಾಗೃತಾವಸ್ಥೆಯಲ್ಲಿ ಇರುವಂತೆ ನೋಡಿಕೊಳ್ಳುವುದು.

ನಮ್ಮ ಸಂಪರ್ಕಕ್ಕೆ ಬರುವ ಎಲ್ಲರಿಗೂ ಈ ಬಗ್ಗೆ ಯೋಚಿಸುವಂತೆ ಮಾಡುವುದು.

ಆ ಬದಲಾವಣೆಯ ನಿರೀಕ್ಷೆಯಲ್ಲಿ ……………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068…….