ಪರೀಕ್ಷೆಯ ಒತ್ತಡ ಎದುರಿಸುವುದು ಹೇಗೆ?
ವಿಜಯ ದರ್ಪಣ ನ್ಯೂಸ್…
ಪರೀಕ್ಷೆಯ ಒತ್ತಡ ಎದುರಿಸುವುದು ಹೇಗೆ?
(ವ್ಯಕ್ತಿತ್ವ ವಿಕಸನ ಲೇಖನ ಮಾಲಿಕೆ)
ಮೊನ್ನೆ ಮೊನ್ನೆ ತಾನೆ ಹೊಸ ತರಗತಿಗೆ ಬಂದ ಹಾಗಿದೆ ಆಗಲೇ ಮಧ್ಯವಾರ್ಷಿಕ ಪರೀಕ್ಷೆ ಪೂರ್ವ ಸಿದ್ಧತಾ ಪರಿಕ್ಷೆಗಳು ಸಮೀಪಿಸುತ್ತಿವೆ. ಅಬ್ಬಾ! ಪರೀಕ್ಷೆಗಳಿಗೆ ಯಾವ ರೀತಿ ಸಿದ್ಧನಾಗಬೇಕೆಂಬುದೇ ದೊಡ್ಡ ಟೆನ್ಷನ್ ಆಗಿ ಬಿಟ್ಟಿದೆ. ಹೆಚ್ಚುತ್ತಿರುವ ಒತ್ತಡಕ್ಕೆ ಉಪ್ಪು ಸುರಿದಂತೆ ಹೆತ್ತವರ ಬೈಗುಳ, ಓದು ಎನ್ನುವ ಒತ್ತಾಯ,. ಈ ಸಲ ಹೆಚ್ಚು ಅಂಕ ತೆಗೆಯಲೇಬೇಕು ಎನ್ನುವ ಹೇರಿಕೆಯ ಮಾತುಗಳು ನೀನು ಚೆನ್ನಾಗಿ ಓದಿದರೆ ಒಳ್ಳೆಯ ಅಂಕಗಳನ್ನು ಪಡದೇ ಪಡೆಯುತ್ತಿಯಾ ಗಂಭೀರವಾಗಿ ಓದು ಎಂಬ ಶಿಕ್ಷಕರ ಹಿತ ನುಡಿಗಳು. ಅಯ್ಯೋ! ಒಂದೇ ಎರಡೇ ತಲೆ ಸಿಡಿದು ಮೂರಾ ಬಟ್ಟೆ ಆಗುತ್ತಿದೆ. ಇದು ಶಂಕರನ ಅಳಲು. ಶಂಕರ ಎದುರಿಸುತ್ತಿರುವುದು ಹೊರಗಿನ ಒತ್ತಡ. ಇದನ್ನು ಪ್ರೆಜ್ಯೂಮ್ ಪ್ರೆಶರ್ ಎನ್ನುವರು. ಸಾಮಾನ್ಯವಾಗಿ ಹೊರ ಒತ್ತಡವನ್ನು ಎಲ್ಲ ವಿದ್ಯಾರ್ಥಿಗಳು ಎದುರಿಸುತ್ತಾರೆ.
ಪರೀಕ್ಷೆ ಸಮೀಪಿಸಿದಂತೆ ಎಲ್ಲಿಲ್ಲದ ತಲೆನೋವು ವಕ್ಕರಿಸಿಕೊಳ್ಳುತ್ತದೆ. ಒಂದು ವೇಳೆ ಫೇಲ್ ಆಗಿಬಿಟ್ಟರೆ ಎಂದು ನೆನೆದು ಬೆವರು ಕಿತ್ತು ಬರುತ್ತದೆ. ಊಟ ಆಟ ಯಾವುದರಲ್ಲೂ ಸೊಗಸಿಲ್ಲ. ಮೈ ಎಲ್ಲ ನೋವು. ಒಂದು ರೀತಿಯ ಅಶಕ್ತತೆಯು ಕಾಡುತ್ತಿದೆ. ಮನೆಯಲ್ಲಿ ಇಲ್ಲವೇ ಗೆಳೆಯರು ಮೋಜು ಮಜಾ ಮಾಡುತ್ತ ಛೇಷ್ಟೆ ಮಾಡಿದರೂ ಸಿಟ್ಟು ನೆತ್ತಿಗೇರುತ್ತದೆ. ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಓದಿದರೆ, ಒದಿದ್ದು ತಲೆಯಲ್ಲಿ ಉಳಿಯುತ್ತಿಲ್ಲ. ಒಂದು ವೇಳೆ ನೆನಪಿನಲ್ಲುಳಿದರೂ ಅದನ್ನು ಬರೆಯಲು ಹೋದರೆ ಒಂದಕ್ಷರವನ್ನೂ ಮೂಡಿಸಲಾಗುತ್ತಿಲ್ಲ. ಇವೆಲ್ಲ ವಿವಿಧ ವಿದ್ಯಾರ್ಥಿಗಳ ನೋವು ಹತಾಶೆಗಳು.
ವಿದ್ಯಾರ್ಥಿಗಳೆ, ಇವು ಎಲ್ಲ ತೀವ್ರ ಒತ್ತಡದ ಲಕ್ಷಣಗಳು. ಮಾನಸಿಕ ಒತ್ತಡದ ಸೂಚನೆಗಳು. ಓದಿದ್ದು ಜ್ಞಾಪಕದಲ್ಲಿ ಇಟ್ಟುಕೊಳ್ಳಲಾಗುತ್ತಿಲ್ಲ ಎನ್ನುವವರು ಮನೋವೈದ್ಯರು ಸೂಚಿಸುವಂತೆ ಒತ್ತಡವನ್ನು ನಿವಾರಿಸುವ ತಂತ್ರಗಳನ್ನು ಬಳಸಬೇಕು. ಹೆತ್ತವರು ಗುರುಗಳು ಹೇಳುವ ಮಾತುಗಳು ನಮ್ಮ ಒಳತಿಗೆ ಎಂಬುದನ್ನು ಮನದಲ್ಲಿಟ್ಟುಕೊಂಡು ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಬೇಕು.ಪರೀಕ್ಷಾ ತಯಾರಿ ಈ ಕೆಳಗಿನಂತಿರಲಿ
ಸಮರ್ಪಕ ವೇಳಾ ಪಟ್ಟಿಯ ಅನುಷ್ಠಾನ
ಯಾವಾಗ ಒದಬೇಕು? ಯಾವ ವಿಷಯ ಓದಬೇಕು? ಎಷ್ಟು ಹೊತ್ತು ಓದಬೇಕು? ಎನ್ನುವ ಯೋಜನೆಯ ವೇಳಾ ಪಟ್ಟಿ ಹಾಕಿಕೊಳ್ಳದಿದ್ದರೆ ಪರೀಕ್ಷೆಗೆ ಸರಿಯಾದ ಸಿದ್ಧತೆ ಮಾಡಲು ಸಾಧ್ಯವಿಲ್ಲ. ಕೆಲವು ವಿದ್ಯಾರ್ಥಿಗಳು ವೇಳಾ ಪಟ್ಟಿಯಲ್ಲಿ ಕೇವಲ ಓದನ್ನು ಸೇರಿಸಿ ಮನರಂಜನೆಗೆ ಆಟಗಳಿಗೆ ಮಹತ್ವ ನೀಡದೇ ಇರುವುದರಿಂದ ಎರಡು ಮೂರು ದಿನಗಳವರೆಗೆ ಅಭ್ಯಾಸ ಮಾಡಿ ನಂತರ ವೇಳಾಪಟ್ಟಿಗೆ ಎಳ್ಳು ನೀರು ಬಿಡುತ್ತಾರೆ. ಹತಾಶೆ ಅಸಮಾಧಾನ ಬೇಸರದಿಂದ ಬಳಲುತ್ತಾರೆ. ವೇಳಾ ಪಟ್ಟಿ ನಿರ್ಮಾಣ ಸೂಚಿ ಇದ್ದಂತಿರಲಿ. ಓದಿಗೆ ಬೇಕಾದ ನೀಲನಕ್ಷೆಯಂತಿರಲಿ. ಓದಿನತ್ತ ನಿಮ್ಮನ್ನು ಕೈ ಹಿಡಿದು ನಡೆಸಿಕೊಂಡು ಹೋಗುವ ಸಾಧನವಾಗಿರಲಿ. ಇನ್ನು ಕೆಲವರು ಹೆತ್ತವರ ಶಿಕ್ಷಕರ ಮಾರ್ಗದರ್ಶನದಲ್ಲಿ ಸೂಕ್ತವಾದ ವೇಳಾ ಪಟ್ಟಿಯನ್ನೇನೊ ಸಿದ್ಧ ಪಡಿಸುತ್ತಾರೆ. ಆದರೆ ಅದರ ಪ್ರಕಾರ ಓದಲಾಗುತ್ತಿಲ್ಲ ಎಂದು ಗೋಳಾಡುತ್ತಾರೆ.. ಹೀಗೆ ಆಗಲು ಮುಖ್ಯ ಕಾರಣವೇನು? ಎಂಬ ಪ್ರಶ್ನೆಗೆ ಉತ್ತರವೆಂದರೆ ದೃಢ ಸಂಕಲ್ಪದ ಕೊರತೆ. ಇಚ್ಛಾ ಶಕ್ತಿಯೊಂದಿದ್ದರೆ ಸಾಲದು ಅದರೊಂದಿಗೆ ಕ್ರಿಯಾಶಕ್ತಿಯೂ ಮೇಳೈಸಬೇಕು ಅಂದಾಗ ಮಾತ್ರ ಅಂದುಕೊಂಡ ಓದನ್ನು ಪೂರೈಸಲು ಸಾಧ್ಯ.
ವಿಶ್ರಾಂತಿ ಇರಲಿ ಕೆಲ ಸಮಯ
ದಿನವೊಂದಕ್ಕೆ ಐದಾರು ತಾಸು ಓದುತ್ತೀರಿ ಎಂದಾದರೆ ಪ್ರತಿ ಒಂದು ಗಂಟೆಯ ಓದಿನ ನಂತರ ಕೆಲ ಸಮಯ ಕನಿಷ್ಟ ಐದರಿಂದ ಹತ್ತು ನಿಮಿಷ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಸಂಗೀತ ಆಲಿಸಬಹುದು. ಮನೆಯ ಮುಂದಿನ ಹೂದೋಟದಲ್ಲಿ ನಡೆದಾಡಬಹುದು. ವಿಶ್ರಾಂತಿಯ ಅವಧಿ ನಿರ್ಧರಿಸಿದ್ದಕ್ಕಿಂತ ಹೆಚ್ಚಾಗದಂತೆ ಓದಿನಿಂದ ವಿಮುಖವಾಗದಂತೆ ಜಾಗೃತಿ ವಹಿಸಿ. ಪ್ರತಿ ದಿನ ಓದಿನ ಸಮಯ ಒಂದೇ ಆಗಿರಲಿ ಓದಿನ ಜಾಗವೂ ಒಂದೇ ಆಗಿರಲಿ. ಆ ಜಾಗ ನೋಡಿದ ತಕ್ಷಣ ಮೆದುಳು ಓದುವಂತೆ ಪ್ರೇರೆಪಿಸುತ್ತದೆ. ಓದಿನ ಸಮಯ ಪಾಲನೆಯಲ್ಲಿ ನೆಪಗಳು ಬೇಡವೇ ಬೇಡ.
ನೆನಪಿಟ್ಟುಕೊಳ್ಳುವ ವಿಧಾನ
ನೆನಪಿಟ್ಟುಕೊಳ್ಳುವ ಸಲುವಾಗಿ ಮೇಲಿಂದ ಮೇಲೆ ಕಂಠ ಪಾಠ ಮಾಡುವ ರೂಢಿಯನ್ನು ಮಾಡಿಕೊಂಡಿದ್ದಿರಾ? ಈ ಕಂಠ ಪಾಠದ ಪದ್ದತಿ ಕೆಲವು ವಿಷಯಗಳಿಗೆ ಅಂದರೆ ಕವಿತೆ, ವಚನ, ಶ್ಲೊಕಗಳಿಗೆ ಫಾರ್ಮುಲಾಗಳಿಗೆ ಉತ್ತಮ. ನಮ್ಮ ಮೆದುಳಿಗೆ ಆಹ್ಲಾದತೆಯನ್ನು ಕೊಡುವ ಸಂಗತಿಯಲ್ಲ. ಹಾಗಾಗಿ ಇನ್ನುಳಿದಂತೆ ದೊಡ್ಡ ಅಂಕದ ಪ್ರಶ್ನೆಗಳಿಗೆ ಕ್ರಿಯಾತ್ಮಕವಾಗಿ ಅಕ್ರೋನಿಮ್ಸ್(ಅಕ್ಷರ ಮುದ್ರಿಕೆ) ಬಳಸಿ. ನಿಮ್ಮ ಸೃಜನಶೀಲತೆಯನ್ನು ಬಳಸಿ ಭಾಷೆ, ವಿಜ್ಞಾನ, ಸಮಾಜ ಅಧ್ಯಯನದ ವಿಷಯ ವಸ್ತುಗಳನ್ನು ವಿಸ್ಯುವಲೈಸ್(ದೃಶ್ಯೀಕರಿಸಿಕೊಳ್ಳುವುದು) ಅತ್ಯುತ್ತಮ ವಿಧಾನ. ಮಹತ್ವದ ಇಸ್ವಿಗಳನ್ನು ವಿಷಯಗಳನ್ನು ಪಟ್ಟಿ ಮಾಡಿ ನೀವು ಓದುವ ಜಾಗದಲ್ಲಿ ಅಂಟಿಸಿಕೊಳ್ಳುವುದು ಒಳಿತು. ದೊಡ್ಡ ಉತ್ತರಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬರೆಯಲು ರೂಢಿಸಿಕೊಳ್ಳಬೇಕು. ಇದರಿಂದ ಆತ್ಮವಿಶ್ವಾಸ ವೃದ್ಧಿಯಾಗುವುದು.
ಸಾಮಾಜಿಕ ಜಾಲ ತಾಣಗಳಿಗೆ ಸೀಮಿತ ಸಮಯ
ಯಾವಾಗಲೂ ಬರೀ ಓದು ಓದು ಎಂದರೆ ಬೋರ್ ಆಗುವುದು ಹೀಗಾಗಿ ಮನರಂಜನೆಗೆ ಅಂದರೆ ಟಿವಿ ನೋಡುವುದಕ್ಕೆ ಹೊರಗಡೆ ಸುತ್ತಾಡುವುದಕ್ಕೆ ಸಿನಿಮಾಗಳಿಗೆ ಕೆಲ ಸಮಯ ಎತ್ತಿಡಿ. ಕೈಯಲ್ಲಿರುವ ಸ್ಮಾರ್ಟ್ ಫೊನಿನಲ್ಲಿ ಕಳೆದು ಹೋಗದಂತೆ ಎಚ್ಚರ ವಹಿಸಿ. ಪೂರ್ಣ ದಿನ ಸಾಮಾಜಿಕ ಜಾಲತಾಣಗಳಲ್ಲಿ ಕಳೆದು ಹೋಗುತ್ತೇನೆಂದು ಅದನ್ನೆಂದು ಬಳಸುವ ಗೋಜಿಗೆ ಹೋಗುವುದಿಲ್ಲ ಎಂಬಂತಹ ವಾಸ್ತವವಲ್ಲದ ನಿರ್ಣಯಗಳನ್ನು ತೆಗೆದುಕೊಳ್ಳದಿರಿ. ಇಂಥ ನಿರ್ಣಯಗಳಿಂದ ಮನಸ್ಸು ಮತ್ತೆ ಮತ್ತೆ ಅದರತ್ತ ವಾಲುತ್ತದೆ. ಆದ್ದರಿಂದ ವಾರಕ್ಕೆ ಎರಡ್ಮೂರು ಗಂಟೆ ನಿರ್ಧರಿಸಿದರೆ ಸೂಕ್ತ. ಸ್ಮಾರ್ಟ್ ಫೋನ್ ಗಳ ಬಳಕೆಯಂತೂ ಅಗತ್ಯತೆ ಬಿದ್ದಾಗ ಮಾತ್ರವಿರಲಿ.
ಊಟ ನಿದ್ದೆ ವ್ಯಾಯಾಮ
ಊಟ ನಿದ್ದೆ ವ್ಯಾಯಾಮಗಳು ಓದುವಾಗ ಶತ್ರುಗಳಂತೆ ಎನ್ನಿಸುತ್ತವೆ. ನಡುವೆ ನಡುವೆ ತೊಂದರೆ ಕೊಡುತ್ತವೆ. ಸಾಧ್ಯವಾದಷ್ಟು ಇವುಗಳನ್ನು ತೊರೆದು ಬಿಡಬೇಕೆಂದು ನಿರ್ಧರಿಸುತ್ತಿರಿ. ಇದು ನಿಜಕ್ಕೂ ಅಪಾಯಕಾರಿ ನಿರ್ಧಾರ. ಆಹಾರ ತೆಗೆದುಕೊಂಡರೆ ನಿದ್ದೆ ಬರುವುದು ನಿದ್ದೆಗೆ ಜಾರಿದರೆ ಓದಲಾಗುವುದಿಲ್ಲ ಎಂದು ಊಟ ದೂರ ಮಾಡಬೇಡಿ. ಊಟ ಬಿಟ್ಟರೆ ನಿಶ್ಯಕ್ತತೆ ಉಂಟಾಗುವುದು ನಂತರ ಕಾಯಿಲೆಗೆ ಬೀಳುವ ಸಂಭವನೀಯತೆ ಹೆಚ್ಚು. ಆದ್ದರಿಂದ ಸಮಯಕ್ಕೆ ಸರಿಯಾಗಿ ಆಹಾರನ್ನು ಸೇವಿಸಿ. ಹಸಿ ತರಕಾರಿ, ಮೊಳಕೆ ಒಡೆದ ಕಾಳುಗಳನ್ನು ಯಥೇಚ್ಛವಾಗಿ ತಿನ್ನಿ. ಜಂಕ್ ಫುಡ್ಗಳಿಂದ ದೂರವಿರಿ. ಇವು ಮೆದುಳು ಚುರುಕಾಗಿ ಕೆಲಸ ನಿರ್ವಹಿಸಲು ಉತ್ತೇಜಿಸುತ್ತವೆ. ನಿದ್ದೆ ಬಾರದಿರಲು ಚಹ ಸೇವಿಸುವುದು ಅಥವಾ ಔಷಧಿಗಳನ್ನು ಬಳಸುವುದು ತುಂಬಾ ಅಪಾಯಕಾರಿ. ನಿದ್ದೆ ಕುಂಠಿತವಾದರೆ ಮೆದುಳಿನ ಮೇಲೆ ತೀವ್ರವಾದ ಪ್ರಭಾವ ಬೀರುತ್ತದೆ. ಮೆದುಳಿನ ಕಾರ್ಯಕ್ಷಮತೆಗೂ ಪೆಟ್ಟು ಬೀಳುತ್ತದೆ. ನಿದ್ದೆಯು ಮೆದುಳಿಗೆ ಪುನಶ್ಚೇತನ್ಯ ನೀಡುತ್ತದೆ. ಕಾರಣ ಸೂಕ್ತ ಪ್ರಮಾಣದ ನಿದ್ದೆಯನ್ನು ದೂರಗೊಳಿಸಬೇಡಿ. ನಿತ್ಯ ವ್ಯಾಯಾಮಕ್ಕೆಂದು ಕೆಲ ಸಮಯ ಮೀಸಲಿಡಿ. ಸರಳ ವ್ಯಾಯಾಮ ಮಾಡಿ. ವಾಕಿಂಗ್ ಜಾಗಿಂಗ್ ಇರಲಿ. ತೀವ್ರತರವಾದ ವ್ಯಾಯಾಮ ಮೆದುಳಿಗೆ ದಣಿವು ತರಿಸುತ್ತದೆ. ತಕ್ಕ ಪ್ರಮಾಣದ ವ್ಯಾಯಾಮವಿರಲಿ. ಊಟ ನಿದ್ದೆ ವ್ಯಾಯಾಮ ಶತ್ರುಗಳು ಎನ್ನುವ ತಪ್ಪು ಕಲ್ಪನೆಯಿಂದ ಹೊರ ಬನ್ನಿ. ಇವೆಲ್ಲ ಜೀವನದ ಅಗತ್ಯಗಳು ಎಂಬ ಸಕರಾತ್ಮಕತೆಯಿಂದ ನಿರ್ವಹಿಸಿ.
ಸ್ನೇಹಲೋಕ
ಸ್ನೇಹಿತರು ಅಂದರೆ ಪಂಚ ಪ್ರಾಣ. ಗೆಳತಿಯರೆಂದರೆ ಜೀವ ಬಿಡ್ತಿನಿ ಅವರು ಯಾವಾಗ ಬೇಕಾದರೂ ಕರೆಯಲಿ ಎಲ್ಲವನ್ನೂ ಬಿಟ್ಟು ಹೊರಟು ಬಿಡುತ್ತೇನೆ ಅನ್ನೋ ಜಾಯಮಾನದವರು ನೀವಾದರೆ ನಿಮ್ಮ ಅತಿಯಾದ ಭಾವನಾತ್ಮಕತೆಗೆ ಕಡಿವಾಣ ಹಾಕಿ. ಗೆಳೆಯರೆಂದರೆ ಪ್ರಗತಿಗೆ ಒಬ್ಬರಿಗೊಬ್ಬರು ಪೂರಕವಾಗಬೇಕು. ಉತ್ಸಾಹ ಪ್ರೋತ್ಸಾಹದ ಚಿಲುಮೆಯಂತಿರಬೇಕು. ನಿಮ್ಮ ದೌರ್ಬಲ್ಯಗಳನ್ನು ತಿದ್ದುವ, ಶಕ್ತಿಗಳನ್ನು ಸಂಪೂರ್ಣವಾಗಿ ಬಳಸಲು ಉತ್ತೇಜಿಸುವಂತಿರಬೇಕು. ಸಾಧ್ಯವಾದರೆ ಗುಂಪು ಅಧ್ಯಯನ ಮಾಡಿ.ಸ್ಪೂರ್ತಿಯ ಮಾತುಗಳಿರಲಿ. ನಿನ್ನ ಕೈಯಲ್ಲಿ ಏನೂ ಸಾಧಿಸಲು ಸಾಧ್ಯವಿಲ್ಲ ಎಂದು ನಿರುತ್ಸಾಹಗೊಳಿಸುವ ಮಿತ್ರರಿಂದ ದೂರವಿರಿ. ನಿಮ್ಮನ್ನು ನೀವಿದ್ದ ಹಾಗೆ ಸ್ವೀಕರಿಸುವವನೇ ನಿಜವಾದ ಸ್ನೇಹಿತ ಎಂಬುದು ನೆನಪಿನಲ್ಲಿರಲಿ.
ದೃಷ್ಟಿ ಬದಲಿಸಿಕೊಳ್ಳಿ
ನನ್ನಿಂದಾಗುವುದಿಲ್ಲ ಎಂಬ ನಕಾರಾತ್ಮಕ ದೃಷ್ಟಿ ಬದಲಿಸಿ. ಸಕಾರಾತ್ಮಕತೆಯತ್ತ ಗಮನ ಕೊಡಿ. ಸಕಾರಾತ್ಮಕ ದೃಷ್ಟಿಕೋನದಿಂದ ಒತ್ತಡ ಕಡಿಮೆಯಾಗುತ್ತದೆ. ಅರ್ಥವಿಲ್ಲದ ಭಯಗಳು ಕಾಡುವುದಿಲ್ಲ. ಆತ್ಮವಿಶ್ವಾಸ ವೃದ್ಧಿಸುತ್ತದೆ. ಮುಂದೂಡುವ ಪ್ರವೃತ್ತಿಯಿಂದ ಮತ್ತು ಸೋಮಾರಿತನದಿಂದ ಹೊರ ಬರುತ್ತೀರಿ. ಸಮಯ ನಿರ್ವಹಣೆ ತಿಳಿಯುತ್ತದೆ. ಉಜ್ವಲ ಭವಿಷ್ಯವನ್ನು ಕಟ್ಟಿಕೊಳ್ಳಬೇಕೆಂಬ ಕನಸು ಮೂಡುತ್ತದೆ. ಪರೀಕ್ಷೆಯ ಒತ್ತಡವೂ ದೂರವಾಗುತ್ತದೆ.
ಲೇಖನ
– ಜಯಶ್ರೀ.ಜೆ. ಅಬ್ಬಿಗೇರ
ಇಂಗ್ಲೀಷ್ ಉಪನ್ಯಾಸಕಿ
ಬೆಳಗಾವಿ
ಮೊ: ೯೪೪೯೨೩೪೧೪೨