ನುಲಿಯ ಚಂದಯ್ಯನವರ ಕಾಯಕ ನಿಷ್ಠೆ ರೂಪಿಸಿಕೊಳ್ಳಬೇಕು: ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್

ವಿಜಯ ದರ್ಪಣ ನ್ಯೂಸ್…

ಜಿಲ್ಲಾಡಳಿತ ಭವನದಲ್ಲಿ ನುಲಿಯ ಚಂದಯ್ಯನವರ ಜಯಂತಿ ಆಚರಣೆ

ಪ್ರತಿಯೊಬ್ಬರೂ ಶರಣ ನುಲಿಯ ಚಂದಯ್ಯನವರ ಕಾಯಕ ನಿಷ್ಠೆ ರೂಪಿಸಿಕೊಳ್ಳಬೇಕು: ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್. 19, 2024 :- ಹನ್ನೆರಡನೆಯ ಶತಮಾನದಲ್ಲಿ ಕಾಯಕಯೋಗಿ ಬಸವಣ್ಣನವರ ಸಮಕಾಲೀನ ‘ಶರಣ ನುಲಿಯ ಚಂದಯ್ಯ’ನವರು ತಮ್ಮ ಕಾಯಕ ನಿಷ್ಠೆಯಿಂದ ಸಮಾಜ ಪರಿವರ್ತನೆಗೆ ಶ್ರಮಿಸಿದವರು. ಅವರ ಕಾಯಕ ನಿಷ್ಠೆಯನ್ನು ನಾವು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಅಮರೇಶ. ಹೆಚ್ ಅವರು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ನುಲಿಯ ಚಂದಯ್ಯ’ನವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ‘ನೂಲಿಯ ಚಂದಯ್ಯ’ನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ಕೆಲಸದಲ್ಲಿ ನೂಲಿಯ ಚಂದಯ್ಯನವರ ಕಾಯಕ ನಿಷ್ಠೆಯನ್ನು ಅಳವಡಿಕೊಂಡು ಪಾಲನೆ ಮಾಡಬೇಕು. ಜತೆಗೆ ನಮ್ಮ ಮುಂದಿನ ಪೀಳಿಗೆಗೂ ಹನ್ನೆರಡನೆಯ ಶತಮಾನದ ಶರಣರ ಆದರ್ಶ-ಗುಣಗಳ ಬಗ್ಗೆ ತಿಳಿಸುವ ಮಹತ್ವದ ಜವಬ್ದಾರಿ ಮರೆಯಬಾರದು ಎಂದರು.

ದೇವನಹಳ್ಳಿ ತಾಲ್ಲೂಕಿನ ಮಾಜಿ ಶಾಸಕ ಜಿ.ಚಂದ್ರಣ್ಣ ಅವರು ಮಾತನಾಡಿ ಶರಣ ನುಲಿಯ ಚಂದಯ್ಯನವರ 48 ವಚನಗಳು ದೊರೆತಿದ್ದು, ಅವರ ಎಲ್ಲ ವಚನಗಳು ಕಾಯಕ ಪರಿಕಲ್ಪನೆಯದಾಗಿವೆ. ನಾವುಗಳು ಚಂದಯ್ಯನವರ ಜೀವನ ಚರಿತ್ರೆ, ವಚನಗಳು ತಿಳಿದುಕೊಂಡು ಬದುಕಿನಲ್ಲಿ ರೂಡಿಸಿಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು , ಸಿಬ್ಬಂದಿಗಳು ಉಪಸ್ಥಿತರಿದ್ದರು.