ಕುರಿ ಕಳ್ಳರನ್ನು ಬಂಧಿಸಿದ ಪೊಲೀಸರು

ವಿಜಯ ದರ್ಪಣ ನ್ಯೂಸ್….

ಕುರಿ ಕಳ್ಳರನ್ನು ಬಂಧಿಸಿದ ಪೊಲೀಸರು

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಸೋಮಶೆಟ್ಟಿಹಳ್ಳಿಯಲ್ಲಿ ರೈತ ಸಂತೋಷ್ ಎಂಬುವವರ ಶೇಡ್‌ನಲ್ಲಿ ಸಾಕಲಾಗಿದ್ದ ಕುರಿಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ ವಿವಿಧ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ₹2.30ಲಕ್ಷ ಮೌಲ್ಯದ ಕುರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಗ್ರಾಮಾಂತರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸಾದಿಕ್ ಪಾಷ ತಿಳಿಸಿದ್ದಾರೆ.

ಸಿ.ಸಿ.ಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ತನಿಖೆ ಕೈಗೊಂಡಿರುವ ಪೊಲೀಸರು ದೊಡ್ಡಬಳ್ಳಾಪುರ ದರ್ಗಾಪೇಟೆ ನಿವಾಸಿ ನೂರುಲ್ಲಾ, ರೋಜಿಪುರ ನಿವಾಸಿ ಮಹಮ್ಮದ್ ಎಂಬುವವರನ್ನು ಬಂಧಿಸಿದ್ದಾರೆ.

2023ರ ಫೆಬ್ರುವರಿಯಲ್ಲಿ ತಾಲ್ಲೂಕಿನ ಲಿಂಗನಹಳ್ಳಿ ನಾಗೇಶ್ ಎಂಬುವರ ಶೆಡ್‌ನಲ್ಲಿ ಕುರಿ ಕಳವು ನಡೆದಿತ್ತು. ಕಾರಿನಲ್ಲಿ ಬಂದಿದ್ದ ಕಳ್ಳರು ಕುರಿಗಳನ್ನು ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದರು. ಈ ಪ್ರಕರಣದಲ್ಲೂ ಬಂಧಿತರಾಗಿರುವ ಆರೋಪಿಗಳೇ ಭಾಗಿಯಾಗಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ.