ಜಾನಪದ ಮತ್ತು ಸಾಹಿತ್ಯ ಬದುಕಿನ ಎಲ್ಲ ಅಂಗಗಳ ತಾಯಿಬೇರು: ಡಾ.ಎ.ಆರ್.ಗೋವಿಂದಸ್ವಾಮಿ 

ವಿಜಯ ದರ್ಪಣ ನ್ಯೂಸ್….
ಸಂಸ್ಕೃತಿ, ರಂಗಭೂಮಿ, ಜಾನಪದ ಮತ್ತು ಸಾಹಿತ್ಯ ಬದುಕಿನ ಎಲ್ಲ ಅಂಗಗಳ ತಾಯಿಬೇರು:ಡಾ.ಎ.ಆರ್. ಗೋವಿಂದಸ್ವಾಮಿ
ಸಂಸ್ಕೃತಿ, ರಂಗಭೂಮಿ, ಜಾನಪದ ಮತ್ತು ಸಾಹಿತ್ಯ ಬದುಕಿನ ಎಲ್ಲ ಅಂಗಗಳ ತಾಯಿಬೇರು. ಜೀವನದ ದಾರಿಗಳನ್ನು ತೋರಿಸಿಕೊಡುವ ಅಪೂರ್ವ ನೆಲೆ. ಅದರ ಸಮರ್ಥ ಸಂಸರ್ಗಕ್ಕೆ ಬಂದವರು ಎಂದೂ ದಾರಿ ತಪ್ಪುವುದಿಲ್ಲ. ಸೂಕ್ತ ಮಾರ್ಗದರ್ಶನ ಮಾಡುವ ಮಹಾಕಾವ್ಯ ಎಂದು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ. ಎ.ಆರ್. ಗೋವಿಂದಸ್ವಾಮಿ ನುಡಿದರು.
ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್, ಮುದ್ದುಶ್ರೀ ದಿಬ್ಬದಲ್ಲಿ ಹಮ್ಮಿಕೊಂಡಿರುವ ಇಪ್ಪತ್ಮೂರು ದಿನಗಳ ರಂಗತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಹಳ್ಳಿಗಾಡು, ಜಾನಪದ ಸಂಶೋಧನೆಯ ಹಿನ್ನೆಲೆಯಿರುವವರ ಆಲೋಚನಾ ಕ್ರಮವೇ ಪ್ರತಿಯೊಬ್ಬರಲ್ಲೂ ಹೊಸ ಚೈತನ್ಯವನ್ನು ತಂದುಕೊಡಬಲ್ಲದು. ಅಂತಹ ಸಾಂಸ್ಕೃತಿಕ ಪರಂಪರೆಯನ್ನೇ ಉಸಿರಾಗಿಸಿಕೊಂಡು ಪರಿಸರದ ನಡುವಿನಲ್ಲಿ ಇಂಥದೊಂದು ಕೇಂದ್ರ ಸ್ಥಾಪಿಸಿರುವ ಬೈರೇಗೌಡರನ್ನು ಅಭಿನಂದಿಸಲೇಬೇಕು.
ದಿಕ್ಕು ತಪ್ಪುತ್ತಿರುವ ಯುವ ಜನತೆಗೆ ಮಾರ್ಗದರ್ಶಕವಾಗಬಲ್ಲ ವಸತಿ ಸಹಿತ ರಂಗತರಬೇತಿ ಶಿಬಿರ ನಿಜಕ್ಕೂ ಇಲ್ಲಿ ಪಾಲ್ಗೊಂಡವರ ಪಾಲಿನ ಕಾಮಧೇನುವಾಗಬಲ್ಲದು. ನಮ್ಮ ಪೂರ್ವಜರು ಕೇವಲ ಎರಡು ಮೂರು ತಲೆಮಾರಿನಷ್ಟು ಹಿಂದೆ ಬಂದು ಹೋದ ಮಹನೀಯರ ಸಾಧನೆಗಳು ಹೀಗೆಯೇ ಆರಂಭವಾಗಿ ಅವರ ಸಾಧನೆಗೆ ಸೋಪಾನವಾದುದು ಇತಿಹಾಸವೇ ಸರಿ ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ರಾಮನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಆರ್ ಚಂದ್ರಯ್ಯ ಮಾತನಾಡಿ ಇದೊಂದು ಮಾದರಿ ಕಾರ್ಯಕ್ರಮ. ನಮ್ಮದು ಸಮೃದ್ಧ ನಿಸರ್ಗ ಮೈಸಿರಿಯನ್ನು ಹೊದ್ದು ಮಲಗಿರುವ ವಿಶಿಷ್ಟ ಬೀಡು. ಬೆಟ್ಟಗುಡ್ಡಗಳ ನಡುವೆ ನಡೆದಾಡುವುದೇ ಒಂದು ಸೊಗಸು. ಸ್ವರ್ಗವನ್ನೂ ಮೀರಿಸುವ ಈ ಸ್ಥಳದಲ್ಲಿ ಒಂದು ಅದ್ಭುತ ಕಾರ್ಯಕ್ರಮ ಜರುಗುತ್ತಿರುವುದು ಜಿಲ್ಲೆಯ ಹೆಮ್ಮೆಯ ಸಂಗತಿ ಎಂದರು.
ಹುಟ್ಟು-ಸಾವುಗಳ ನಡುವೆ ನಾವು ಮಾಡುವ ಕಾರ್ಯಗಳು ಶಾಸ್ವತವಾಗಿ ನಿಲ್ಲಬೇಕೆಂಬುದು ನನ್ನಪ್ಪನ ಮಹದಾಸೆ. ಅವರ ಆಸೆಯನ್ನು ಮುದ್ದುಶ್ರೀ ದಿಬ್ಬ ಸಂಸ್ಥಾಪಿಸುವ ಮೂಲಕ ಮತ್ತು ಸದಾ ಚಟುವಟಿಕೆಗಳ ತಾಣವಾಗಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಈ ಕಾರ್ಯಕ್ರಮಗಳ ಬಗ್ಗೆ ನನಗೆ ಹೆಮ್ಮೆಯಿದೆ. ಅದೇ ಗುರಿಯನ್ನು ಇಟ್ಟುಕೊಂಡು ರಾಜ್ಯಮಟ್ಟದಲ್ಲಿ ನಡೆಯುತ್ತಿರುವ ಈ ಶಿಬಿರ ಆಯೋಜಿಸಲಾಗಿದೆ ಎಂದು ಜಾನಪದ ವಿದ್ವಾಂಸ, ನಾಟಕಕಾರ ಹಾಗೂ ಕೆ.ಎಸ್. ಮುದ್ದಪ್ಪ ಸ್ಮಾರಟ ಟ್ರಸ್ಟ್ ಕಾರ್ಯದರ್ಶಿ ಡಾ. ಎಂ. ಬೈರೇಗೌಡ ನುಡಿದರು.
ಜಿಲ್ಲೆಯವರೇ ಆದ ಈಗಷ್ಟೇ ಆಯ್ಕೆಯಾಗಿರುವ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ. ಎ.ಆರ್. ಗೋವಿಂದಸ್ವಾಮಿ, ಹೊಸದಾಗಿ ಅಧಿಕಾರ ಸ್ವೀಕರಿಸಿರುವ ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಹಾಗೂ ನಾಟಕ ಅಕಾಡೆಮಿ ಸದಸ್ಯ ಬಾಬು ಕುಂಬಾಪುರ ಅವರನ್ನು ಇದೇ ಸಂದರ್ಭದಲ್ಲಿ ಶಿಬಿರದ ಪರವಾಗಿ ಗೌರವಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಬಾಬು ಅತಿಥಿಗಳಾಗಿ ಪಾಲ್ಗೊಂಡಿದ್ದರು. ರಂಗನಿರ್ದೇಶಕ ನವೀನ್ ಭೂಮಿ ತಿಪಟೂರು, ರಂಗಕರ್ಮಿ, ಸಿನಿಮಾ ತಂತ್ರಜ್ಞ ಚಂದ್ರಮೌಳಿ ಕೆ.ಪಿ. ಪಾಲ್ಗೊಂಡಿದ್ದರು. ರಾಜ್ಯದಾದ್ಯಂತ ಹದಿನೈದು ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ.