ಬಿಬಿಎಂಪಿಗೆ ಭೇಟಿ ನೀಡಿದ ಗ್ಯಾಂಗ್ಟಾಕ್ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ಮತ್ತು ನಿಯೋಗ

ವಿಜಯ ದರ್ಪಣ ನ್ಯೂಸ್…

ಬಿಬಿಎಂಪಿಗೆ ಭೇಟಿ ನೀಡಿದ ಗ್ಯಾಂಗ್ಟಾಕ್ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ಮತ್ತು ನಿಯೋಗ

ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಗಾಂಗ್ಟಾಕ್ ಮುನ್ಸಿಪಲ್ ಕಾರ್ಪೊರೇಷನ್ ನ ಮೇಯರ್ ನಿಯೋಗವು ಇಂದು ಪಾಲಿಕೆಗೆ ಭೇಟಿ ನೀಡಿ ಕೂಲಂಕುಷವಾಗಿ ಚರ್ಚಿಸುವುದರ ಜೊತೆಗೆ ಘನತ್ಯಾಜ್ಯ ವಿಲೇವಾರಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಗ್ಯಾಂಗ್ಟಾಕ್ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ಶ್ರೀ ನೆಲ್ ಬಹದ್ದೂರ್ ಚೆಟ್ರಿ ಮತ್ತು ಉಪ ಮೇಯರ್ ಶ್ರೀಮತಿ ಶೆರಿಂಗ್ ಪಾಲ್ಡೆನ್ ಭುಟಿಯಾ ರವರನ್ನೊಳಗೊಂಡ ನಿಯೋಗವು ಇಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತಕ್ಕೆ ಭೇಟಿ ನೀಡಿದರು. ಪಾಲಿಕೆ ವ್ಯಾಪ್ತಿಯಲ್ಲಿ ಯಾವ ರೀತಿ ಘನತ್ಯಾಜ್ಯ ನಿರ್ವಹಣೆಯನ್ನು ಮಾಡಲಾಗುತ್ತಿದೆ, ಘನತ್ಯಾಜ್ಯದಲ್ಲಿ ಪಾಲಿಕೆಯ ಪಾತ್ರವೇನು ಹಾಗೂ ಬಿ.ಎಸ್.ಡಬ್ಲ್ಯೂ.ಎಂ.ಎಲ್ ನ ಪಾತ್ರವೇನು, ತ್ಯಾಜ್ಯ ವಿಂಗಡಣೆ ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಮಾಹಿತಿ ಪಡೆದುಕೊಂಡರು.

ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ತೆಗೆದುಕೊಂಡಿರುವ ಕ್ರಮಗಳು, ಮಿನಿ ಟ್ರಾನ್ಸ್ಫರ್ ಸ್ಟೇಷನ್ಸ್, ದ್ವಿತೀಯ ಟ್ರಾನ್ಸ್ಫರ್ ಸ್ಟೇಷನ್ಸ್, ತ್ಯಾಜ್ಯ ಸಂಸ್ಕರಣಾ ಘಟಕಗಳು, ಬಿಡದಿಯಲ್ಲಿ ನೂತನವಾಗಿ ಸ್ಥಾಪಿಸಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕ ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಪಾಲಿಕೆ ವತಿಯಿಂದ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ಒದಗಿಸಲಾಯಿತು.

ಮುಖ್ಯ ಆಯುಕ್ತರ ಭೇಟಿ:

ಗ್ಯಾಂಗ್ಟಾಕ್ ಕಾರ್ಪೊರೇಷನ್‌ ನ ಮೇಯರ್ ಒಳಗೊಂಡ ನಿಯೋಗವು ಬಿಬಿಎಂಪಿ ಕೇಂದ್ರ ಕಚೇರಿಗೆ ಭೇಟಿ ನೀಡಿ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ಅವರನ್ನು ಭೇಟಿ ಮಾಡಿ ಘನತ್ಯಾಜ್ಯ ನಿರ್ವಹಣೆ ಕಾರ್ಯನಿರ್ವಹಣೆಯ ಕುರಿತು ಚರ್ಚಿಸಿದರು. ಇದೇ ವೇಳೆ ಗ್ಯಾಂಗ್ಟಾಕ್ ಮೇಯರ್ ನಿಯೋಗವನ್ನು ಮುಖ್ಯ ಆಯುಕ್ತರು ಗೌರವಿಸಿ ಸನ್ಮಾನಿಸಿದರು.

ಗ್ಯಾಂಗ್ಟಾಕ್ ನಲ್ಲಿ ಪ್ರತಿನಿತ್ಯ 7೦ ಟನ್ ತ್ಯಾಜ್ಯ ಉತ್ಪತ್ತಿ:

ಗ್ಯಾಂಗ್ಟಾಕ್ ಮುನ್ಸಿಪಲ್ ಕಾರ್ಪೊರೇಷನ್ ನಲ್ಲಿ 1 ಲಕ್ಷ ಜನಸಂಖ್ಯೆಯಿದ್ದು, ಪ್ರತಿನನಿತ್ಯ 70 ಟನ್ ಪ್ರತಿನಿತ್ಯ ಉತ್ಪಯಾಗಲಿದೆ. ಈ ಸಂಬಂಧ ವೈಜ್ಞಾನಿಕ ರೀತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡುವ ಉದ್ದೇಶದಿಂದ ಇಂದು ಪಾಲಿಕೆಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಪಡೆದುಕೊಂಡರು.

ಟ್ರಾನ್ಸ್ಫರ್ ಸ್ಟೇಷನ್ ಗೆ ಪದ್ಧತಿಗೆ ಮೆಚ್ಚುಗೆ:

ಬಿಬಿಎಂಪಿ ವಯಾಪ್ತಿಯಲ್ಲಿ ಮೂಲದಲ್ಲಿಯೇ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಬಿಟಿಎಂ ಲೇಔಟ್ ಕೋರಮಂಗಲ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಿರುವ ದ್ವಿತೀಯ ಹಂತದ ಘನತ್ಯಾಜ್ಯ ವರ್ಗಾವಣೆ ಹಾಗೂ ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಘಟಕಕ್ಕೆ ಗ್ಯಾಂಗ್ಟಾಕ್ ಮುನಿಸಿಪಲ್ ಕಾರ್ಪೊರೇಶನ್ ನಿಯೋಗವು ಭೇಟಿ ನೀಡಿ ಪರಿಶೀಲಿನೆ ಮಾಡಿದರು. ಈ ಮಾದರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಗ್ಯಾಂಗ್ಟಾಕ್ ನಲ್ಲೂ ಇದೇ ರೀತಿಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಒಲವು ತೋರಿಸಿದರು.

ಈ ವೇಳೆ ಬಿಎಸ್‌ಡಬ್ಲ್ಯೂಎಂಎಲ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾದ ರಮಾಮಣಿ, ಮುಖ್ಯ ಎಂಜಿನಿಯರ್ ಆದ ಬಸವರಾಜ ಕಬಾಡೆ, ಗ್ಯಾಂಗ್ಟಾಕ್ ಮಹಾನಗರ ಪಾಲಿಕೆ ಆಯುಕ್ತರಾದ ಆರ್.ಬಿ. ಭಂಡಾರಿ, ನಗರಾಬಿವೃದ್ಧಿ ಇಲಾಖೆಯ ಪ್ರಧಾನ ಮುಖ್ಯ ಇಂಜಿನಿಯರ್ ಆದ ಶೈಲೇಂದ್ರ ಶರ್ಮಾ ಹಾಗೂ ನಿಯೋಗ ಸೇರಿದಂತೆ ಪಾಲಿಕೆಯ ಇತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.