ಕೆರೆಗಳ ಒತ್ತುವರಿಗಳನ್ನು ಗುರುತಿಸಿ ತೆರುವು ಕಾರ್ಯಾಚರಣೆ ನಡೆಸಲು ಸೂಚನೆ: ಆಯುಕ್ತ ತುಷಾರ್ ಗಿರಿನಾಥ್.

ವಿಜಯ ದರ್ಪಣ ನ್ಯೂಸ್….

ಭೂದಾಖಲೆಗಳು ಹಾಗೂ ಕಂದಾಯ ಇಲಾಖೆಗಳ ಸಮನ್ವಯದೊಂದಿಗೆ ಬೃಹತ್ ನೀರುಗಾಲುವೆ, ಕೆರೆಗಳ ಒತ್ತುವರಿಗಳನ್ನು ಗುರುತಿಸಿ ತೆರುವು ಕಾರ್ಯಾಚರಣೆ ನಡೆಸಲು ಸೂಚನೆ: ತುಷಾರ್ ಗಿರಿನಾಥ್.

ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ನೀರುಗಾಲುವೆ, ಕೆರೆಗಳ ಒತ್ತುವರಿಗಳನ್ನು ಭೂದಾಖಲೆಗಳು ಹಾಗೂ ಕಂದಾಯ ಇಲಾಖೆಗಳ ಸಮನ್ವಯದೊಂದಿಗೆ ಗುರುತಿಸಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಬೇಕೆಂದು ಮುಖ್ಯ ಆಯುಕ್ತ ಶ್ರೀ ತುಷಾರ್ ಗಿರಿನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಮಳೆ ನೀರುಗಾಲುವೆ ಹಾಗೂ ಕೆರೆಗಳ ಒತ್ತುವರಿ ತೆರುವು ಕಾರ್ಯಾಚರಣೆ ಕುರಿತು ಪಾಲಿಕೆ ಕೇಂದ್ರ ಕಛೇರಿ ಸಭಾಂಗಣ-01ರಲ್ಲಿ ಇಂದು ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಗರದಲ್ಲಿ ಬೃಹತ್ ನೀರುಗಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಸ್ಥಳಗಳನ್ನು ಭೂಮಾಪಕರಿಂದ ಸರ್ವೇ ನಡೆಸಿ ಗುರುತು ಮಾಡಿ, ತಹಶೀಲ್ದಾರ್‌ರವರು ಒತ್ತುವರಿದಾರರನ್ನು ಗುರುತಿಸಿ ವಿಶೇಷ ಜಿಲ್ಲಾಧಿಕಾರಿರವರಿಗೆ ಸಲ್ಲಿಸಿ ಸೂಕ್ತ ಆದೇಶಗಳನ್ನು ಜಾರಿ ಮಾಡಿರುವಂತಹ ಒತ್ತುವರಿಗಳನ್ನು ಕೂಡಲೆ ಹಂತ-ಹಂತವಾಗಿ ತೆರವುಗೊಳಿಸಬೇಕು. ಉಚ್ಛ ನ್ಯಾಯಾಲಯದಲ್ಲಿ ತಡೆಯಾಜ್ಞೆಯಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಿಕೊಂಡು ತೆರವು ಕಾರ್ಯಾಚರಣೆ ನಡೆಸಲು ಸೂಚನೆ ನೀಡಲಾಯಿತು.

ಬೃಹತ್ ನೀರುಗಾಲುವೆ ಒತ್ತುವರಿಗಳ ವಿವರ:

ನಗರದಲ್ಲಿ ಹೊಸ ಒತ್ತುವರಿಗಳು ಸೇರಿದಂತೆ 4316 ಒತ್ತುವರಿಗಳನ್ನು ಗುರುತಿಸಲಾಗಿದ್ದು, ಅದರಲ್ಲಿ 2473 ಒತ್ತುವರಿಗಳನ್ನು ಇದುವರೆಗೆ ತೆರವುಗೊಳಿಸಲಾಗಿದೆ. ಇನ್ನು 1648 ಒತ್ತುವರಿಗಳನ್ನು ತೆರವುಗೊಳಿಸಬೇಕಾಗಿದ್ದು, 195 ಒತ್ತುವರಿ ಪ್ರಕರಣಗಳು ನ್ಯಾಯಾಲಯದಲ್ಲಿರುತ್ತದೆ. ಭೂಮಾಪನಾ ಇಲಾಖೆಯಲ್ಲಿ 889 ಒತ್ತುವರಿಗಳು, ಕಂದಾಯ ಇಲಾಖೆಯಲ್ಲಿ 615 ಒತ್ತುವರಿಗಳು ಹಾಗು ಪಾಲಿಕೆಯಲ್ಲಿ 144 ಒತ್ತುವರಿ ಪ್ರಕರಣಗಳಿದ್ದು, ಆಯಾ ಇಲಾಖೆಗಳಿಗೆ ಕೂಡಲೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಯಿತು. ತಹಶಿಲ್ದಾರ್ ಅವರಿಂದ  ಆದೇಶಗಳನ್ನು ಜಾರಿಗೊಳಿಸಿದ ನಂತರ, ಹಂತ-ಹಂತವಾಗಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗುವುದೆಂದು ರಾಜಕಾಲುವೆ ವಿಭಾಗದ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.

ಕೆರೆಗಳ ಒತ್ತುವರಿಗಳನ್ನು ಗುರುತಿಸಿ ತೆರವುಗೊಳಿಸಿ:

ಪಾಲಿಕೆ ವ್ಯಾಪ್ತಿಯಲ್ಲಿ 202 ಕೆರೆಗಳಿದ್ದು, 183 ಕೆರೆಗಳು ಜೀವಂತ ಕೆರೆಗಳಿವೆ. ಪಾಲಿಕೆ ವ್ಯಾಪ್ತಿಯಲ್ಲಿರುವ ಕರೆಗಳ ಪೈಕಿ 159 ಕೆರೆಗಳಲ್ಲಿ ಒತ್ತುವರಿಯಿದೆ ಎಂಬುದನ್ನು ಗುರುತಿಸಿದ್ದು, ಉಚ್ಛ ನ್ಯಾಯಾಲಯಕ್ಕೆ ಸಲ್ಲಿಸಿರುವ ಕ್ರಿಯಾ ಯೋಜನೆಯ ಪ್ರಕಾರ ಕ್ರಮವಹಿಸಲು ತಹಶೀಲ್ದಾರರಿಗೆ ಪತ್ರಗಳನ್ನು ಬರೆಯಲಾಗಿದೆ. ಈ ಪೈಕಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರು 124 ಕೆರೆಗಳ ಸಮೀಕ್ಷೆ ಮಾಡಿ ಗಡಿ ಗುರುತಿಸಿರುವ ಕೆರೆಗಳಿಗೆ ಸಂಬಂಧಿಸಿದಂತೆ 82 ಕೆರೆಗಳ ನಕ್ಷೆಯನ್ನು ನಿಡಲಾಗಿದೆ. ಒತ್ತುವರಿ ತೆರವು ಕಾರ್ಯಾಚರಣೆ ಸಂಬಂಧ ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ಕ್ರಮವಹಿಸುವುದು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಸೂಚನೆ ನೀಡಿದರು.

 

ಈ ವೇಳೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀ. ಕೆ.ಎ. ದಯಾನಂದ್, ಭೂಮಾಪನ, ಕಂದಾಯ ವ್ಯವಸ್ಥೆ ಹಾಗೂ ಭೂದಾಖಲೆಗಳ ಇಲಾಖೆಯ ಆಯುಕ್ತ ಜೆ. ಮಂಜುನಾಥ್, ವಿಶೇಷ ಆಯುಕ್ತ ಪ್ರೀತಿ ಗೆಹ್ಲೋಟ್, ವಲಯ ಆಯುಕ್ತ ವಿನೋತ್ ಪ್ರಿಯಾ, ಸ್ನೇಹಲ್, ರಮ್ಯಾ, ಕರೀಗೌಡ, ರಮೇಶ್, ಶಿವಾನಂದ್ ಕಪಾಶಿ, ಪ್ರಧಾನ ಅಭಿಯಂತರರು ಪ್ರಹ್ಲಾದ್, ವಲಯ ಜಂಟಿ ಆಯುಕ್ತರು, ವಲಯ ಮುಖ್ಯ ಅಭಿಯಂತರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.