ನೆಲದ ಸಂಸ್ಕೃತಿಯೊಂದು ನಾಶವಾದರೆ ದೇಶವೇ ನಾಶ : ಜನಪದ ಗಾಯಕ ಅಪ್ಪಗೆರೆ ತಿಮ್ಮರಾಜು .

ವಿಜಯ ದರ್ಪಣ ನ್ಯೂಸ್…

ನೆಲದ ಸಂಸ್ಕೃತಿಯೊಂದು ನಾಶವಾದರೆ ದೇಶವೇ ನಾಶ : ಜನಪದ ಗಾಯಕ ಅಪ್ಪಗೆರೆ ತಿಮ್ಮರಾಜು .

ಬೆಂಗಳೂರು:ನೆಲದ ಸಂಸ್ಕೃತಿಯೊಂದು ನಾಶವಾದರೆ ದೇಶವೇ ನಾಶವಾಗುವುದು. ಹೀಗಾಗಿ ಸಂಸ್ಕೃತಿಯ ಬೇರುಗಳೆನಿಸಿದ ಈ ನೆಲಸ ಜನಪದ ಪರಂಪರೆಯನ್ನು ನಮ್ಮ ಯುವಪೀಳಿಗೆಗೆ ತಲುಪಿಸಬೇಕಾದ ಗುರುತರ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಜನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಹೇಳಿದರು.
ಪರಂಪರ ಕಲ್ಚರಲ್ ಫೌಂಡೇಷನ್ ನಗರದ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾಧಕರಿಗೆ ರಂಗಗೌರವ ಮತ್ತು ಪರಸಂಗದ ಗೆಂಡೆತಿಮ್ಮ ನಾಟಕ ಪ್ರದರ್ಶನದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.ಕನ್ನಡದ ಜನಪದವು ಜಗತ್ತಿನ ಎಲ್ಲ ಮನಸುಗಳನ್ನು ಸೂರೆಗೊಳ್ಳುವಷ್ಟು ಸಂಪದ್ಭರಿತವಾಗಿದೆ. ಅದರ ಉಳಿವಿನ ಬಗ್ಗೆ ಗಂಭೀರವಾಗಿ ಆಲೋಚಿಸದಿದ್ದರೆ ಮೂಲ ಕಲಾವಿದರ ಬದುಕು ಮೂರಾಬಟ್ಟೆಯಾಗುತ್ತದೆ. ತಮ್ಮ ಖುಷಿಗಾಗಿ ಹಾಡಿಕೊಳ್ಳುತ್ತಿದ್ದ ಜನಪದ ಕಲಾವಿದರ ಸರಕನ್ನು ಮಾರಾಟದ ಸರಕಾಗಿಸಿಕೊಂಡಿರುವ ನಾಗರಿಕರ ಸೀಮಿತ ವ್ಯಾಪ್ತಿಯ ಕಡೆ ಗಮನ ಹರಿಸಬೇಕಿದೆ ಎಂದರು.

ರಂಗಗೌರವ ಸ್ವೀಕರಿಸಿ ಮಾತನಾಡಿದ ಸಿನಿಮಾ ನಿರ್ದೇಶಕ, ನಿರ್ಮಾಪಕ, ಸಂಘಟಕ, ರಂಗಕರ್ಮಿ ಪಲ್ಲಕ್ಕಿ ರಾಧಾಕೃಷ್ಣ ಪರಂಪರೆ ಮತ್ತು ಸಂಸ್ಕೃತಿ ಜೊತೆಜೊತೆಯಾಗಿಯೇ ಇರುವಂತಹುದು. ಜನರ ಮನಸ್ಸನ್ನು ಮುಟ್ಟದ ಸರಕು ಎಷ್ಟೇ ಮಹತ್ವದ್ದಾದರೂ ಉಪಯೋಗವಿಲ್ಲ. ಪಂಡಿತರು, ಪಾಮರರೆಲ್ಲರ ಸ್ವತ್ತು ಜನಪದ, ಎಲ್ಲರಿಗೂ ಸುಲಭವಾಗಿ ಅರ್ಥವಾಗಬಲ್ಲ ನೆಲೆಯಲ್ಲಿ ಅದು ತೆರೆದುಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಕಾರ್ಯಕ್ರಗಳನ್ನು ರೂಪಿಸಬೆಕಾದ ಅಗತ್ಯವಿದೆ ಎಂದರು.


ಗಿನ್ನೆಸ್ ದಾಖಲೆ ಬರೆದ ಕದ್ರಿ ಗೋಪಾಲರಾಯರ ಶಷ್ಯೆ ಸ್ಯಾಕ್ಸೋಫೋನ್ ಸುಬ್ಬುಲಕ್ಷ್ಮಿ ಮಾತನಾಡಿ ಎಲ್ಲ ಸಂಗೀತ ಮತ್ತು ನೃತ್ಯಗಳ ತಾಯಿಬೇರು ಜನಪದವೇ ಆಗಿದೆ. ಮಡಿವಂತರು ಈ ವಾಸ್ತವ ಸತ್ಯವನ್ನು ತಿಳಿಸಲು ಹಿಂಜರಿಯುತ್ತಾರೆ. ಆದರೆ ಯಾವತ್ತೂ ಸತ್ಯ ಮಡಿಲ ಕೆಂಡವಿದ್ದAತೆ. ಅದು ತನ್ನನ್ನು ತಾನು ಅಭಿವ್ಯಕ್ತಗೊಳಸುತ್ತದೆ ಎಂದರು.
ರಂಗಗೌರವಕ್ಕೆ ಪಾತ್ರರಾದ ಇನ್ನಿತರರೆಂದರೆ ನಾಟಕಕಾರ, ಜಾನಪದ ವಿದ್ವಾಂಸ ಡಾ. ಎಂ. ಬೈರೇಗೌಡ, ರಂಗನಿರ್ದೇಶಕ ರೂಪಾಂತರ ತಂಡದ ಕೆ.ಎಸ್.ಡಿ.ಎಲ್ ಚಂದ್ರು, ವಾಲ್ಮೀಕಿ ಸಂಘದ ಅಧ್ಯಕ್ಷ ಸಿಜೆ ಮಾರುತಿ, ವಾಲ್ಮೀಕಿ ಪತ್ರಿಕೆಯ ಸಂಪಾದಕ ನಾಗರಾಜ ಗಾಣದ ಹುಣಿಸೆ. ಕುಮಾರಿ ಪಿ. ರಿಷಿಕಾ ಅವರ ನೃತ್ಯ ನೆರೆದರವ ಮೆಚ್ಚುಗೆಗೆ ಪಾತ್ರವಾಯಿತು.

ಶ್ರೀ ಕೃಷ್ಣ ಆಲನಹಳ್ಳಿ ಅವರ ಪರಸಂಗದ ಗೆಂಡೆತಿಮ್ಮ ಕಾದಂಬರಿಯನ್ನು ನಾಟಕಕಾರ ಡಾ. ಎಂ. ಬೈರೇಗೌಡ ರಂಗರೂಪಕ್ಕೆ ತಂದು, ರೂಪಾಂತರ ತಂಡದ ಕೆ.ಎಸ್.ಡಿ.ಎಲ್. ಚಂದ್ರು ನಿರ್ದೇಶನದಲ್ಲಿ ನಾಟಕದ ನಾಲ್ಕನೇ ಪ್ರದರ್ಶನ ಇತ್ತು. ಬೆಳಕಿನ ನಿರ್ವಹಣೆ ಮಧು ಮಳವಳ್ಳಿ, ಪ್ರಸಾದನ: ರಾಮಕೃಷ್ಣ ಬೆಳ್ತೂರ್, ಸಂಗೀತ ದೇಸೀ ಮೋಹನ್ ಮತ್ತು ರತ್ನಾ ಸಕಲೇಶಪುರ, ವಿನ್ಯಾಸ ರಾಜು ರೂಪಾಂತರ, ಕಲೆ: ವಾದಿರಾಜ್, ಕೆ.ಎಸ್.ಡಿ.ಎಲ್ ಚಂದ್ರು, ಸಹನಿರ್ದೇಶನ: ಎನ್. ರಾಮಚಂದ್ರ ಇವರದಾಗಿದೆ.

ಏಣಗಿ ಪ್ರಭಾಕರ್ ಕನ್ನಡ ಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಹೆಸರಾಂತ ನಿರೂಪಕ, ರಂಗಕರ್ಮಿ, ಪರಂಪರಾ ಕಲ್ಷರಲ್ ಫೌಂಡೇಷನ್ ಅಧ್ಯಕ್ಷ ಜಿ.ಪಿ. ರಾಮಣ್ಣ, ಸಂಘಟನೆಯ ಮಧುಸೂಧನ ನಾಯಕ್ ಹಾಗೂ ಸುಧಾಕರ್ ಕಾರ್ಯಕ್ರಮವನ್ನು ನಿರ್ವಹಿಸಿದರು.