ಕುಸಿಯುತ್ತಿರುವ ಸೇತುವೆಗಳು ಮತ್ತು ಕಬ್ಬಿಣ ಹಾಗು ಸಿಮೆಂಟಿನ ಜಾಹೀರಾತುಗಳು…….

ವಿಜಯ ದರ್ಪಣ ನ್ಯೂಸ್….

ಕುಸಿಯುತ್ತಿರುವ ಸೇತುವೆಗಳು ಮತ್ತು ಕಬ್ಬಿಣ ಹಾಗು ಸಿಮೆಂಟಿನ ಜಾಹೀರಾತುಗಳು…….

ಭೂಕಂಪಕ್ಕೂ ಕುಗ್ಗಲ್ಲ, ಚಂಡಮಾರುತಕ್ಕೂ ಜಗ್ಗಲ್ಲ, ನಮ್ಮ ಕಂಪನಿಯ ಕಬ್ಬಿಣ ಮತ್ತು ಉಕ್ಕು. ಹಾಗೆಯೇ ನೂರು ವರ್ಷಕ್ಕೂ ಹೆಚ್ಚು ಶಾಶ್ವತವಾಗಿ ಸ್ಥಿರವಾಗಿ ಗಟ್ಟಿಯಾಗಿ ನಿಲ್ಲಲು ಉಪಯೋಗಿಸಿ ನಮ್ಮ ಕಂಪನಿಯ ಸಿಮೆಂಟ್,
ಬಲಿಷ್ಠ – ಸಧೃಡ – ಅಜರಾಮರ……,

ಹೀಗೆ ಟಿವಿ ಹಾಕಿದ ತಕ್ಷಣ ಜಾಹೀರಾತುಗಳು ಪ್ರತಿನಿತ್ಯ ನಮ್ಮ ಕಿವಿ ತೂತಾಗುವಷ್ಟು ಬರುತ್ತದೆ. ಸಿನಿಮಾ ನಟರನ್ನು ಆ ಜಾಹೀರಾತುಗಳ ಮಾಡೆಲ್ ಗಳಾಗಿ ಉಪಯೋಗಿಸಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ತುಂಬಾ ಸಂತೋಷ. ನಮಗೂ ಬೇಕಾಗಿರುವುದು ಅಷ್ಟು ಗಟ್ಟಿಮುಟ್ಟಾದ ಸಿಮೆಂಟ್ ಮತ್ತು ಕಬ್ಬಿಣ…….,

ಆದರೆ ಭಾರತದ ಕೆಲವು ರಾಜ್ಯಗಳಲ್ಲಿ ಇನ್ನೂ ನಿರ್ಮಾಣದ ಅಂತರದಲ್ಲಿರುವ ಅಥವಾ ಇತ್ತೀಚೆಗೆ ನಿರ್ಮಾಣವಾಗಿರುವ ಅಥವಾ ಹಳೆಯದಾದ ಕೆಲವು ಸೇತುವೆಗಳು ದಿಢೀರನೆ ಕುಸಿಯುತ್ತಿದೆ. ನೀವು ನೀಡುತ್ತಿರುವ ಜಾಹೀರಾತು
ಆ ಸರ್ಕಾರಗಳಿಗೆ, ಆ ಇಂಜಿನಿಯರುಗಳಿಗೆ, ಆ ಕಾಂಟ್ರಾಕ್ಟ್ರು ಗಳಿಗೆ, ಆ ಆರ್ಕಿಟೆಕ್ಟ್ ಗಳಿಗೆ ತಲುಪುತ್ತಿಲ್ಲವೇ,……,

ನಿಮ್ಮ ಜಾಹೀರಾತು ನಿಜವೇ ಆಗಿದ್ದರೆ ದಯವಿಟ್ಟು ಸುಪ್ರೀಂಕೋರ್ಟಿಗೆ ಒಂದು ಸಾರ್ವಜನಿಕ ಹಿತಾಸಕ್ತಿಯ ಮನವಿ ಸಲ್ಲಿಸಿ ದೇಶದ ಮತ್ತು ಜನರ ಹಿತಾಸಕ್ತಿಯಿಂದ ಕಳಪೆ ಉಕ್ಕು ಮತ್ತು ಸಿಮೆಂಟು ಉಪಯೋಗಿಸುವುದನ್ನು ನಿಷೇಧಿಸಿ, ಮುಖ್ಯವಾಗಿ ಸರ್ಕಾರದ ಸೇತುವೆ ಮತ್ತು ಕಟ್ಟಡಗಳ ನಿರ್ಮಾಣ ಕೆಲಸಗಳಿಗೆ ನೀವು ಜಾಹೀರಾತು ನೀಡುವ ರೀತಿಯ ಅತ್ಯುತ್ಕೃಷ್ಟ ಸಿಮೆಂಟ್ ಮತ್ತು ಉಕ್ಕನ್ನು ಉಪಯೋಗಿಸಲು ಹೇಳಿ ಅಥವಾ ಪ್ರಧಾನ ಮಂತ್ರಿಗಳಿಗೂ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಅಥವಾ ಸಂಬಂಧಪಟ್ಟ ಸಚಿವರಿಗೂ ದಯವಿಟ್ಟು ಮಾಹಿತಿ ನೀಡಿ. ಇಲ್ಲದಿದ್ದರೆ ನಿಮ್ಮ ಜಾಹೀರಾತುಗಳು ಸುಳ್ಳು ಮತ್ತು ವಂಚನೆ ಎಂದು ಪರಿಗಣಿಸಬೇಕಾಗುತ್ತದೆ. ಅದಕ್ಕಾಗಿ ಸಿನಿಮಾ ನಟರು ಜನರನ್ನು ಮೋಸ ಮಾಡುತ್ತಿದ್ದಾರೆ ಎಂದೂ ಹೇಳಬೇಕಾಗುತ್ತದೆ ಅಥವಾ ಇಡೀ ವ್ಯವಸ್ಥೆ ಭ್ರಷ್ಟಗೊಂಡು ಒಳ್ಳೆಯದನ್ನು ಸ್ವೀಕರಿಸಲು ಸಾಧ್ಯವೇ ಆಗುತ್ತಿಲ್ಲ ಎನ್ನಬೇಕಾಗುತ್ತದೆ ಅಥವಾ ಜನರು ಸಾಯಲಿ ಎಂದೇ ಸರ್ಕಾರಗಳು ಈ ರೀತಿಯ ಕಳಪೆ ಕಾಮಗಾರಿಗಳನ್ನು ಮಾಡುತ್ತಿದೆ ಎಂದಾದರೂ ಭಾವಿಸಬೇಕಾಗುತ್ತದೆ……,

ಏನಿದು ಹುಚ್ಚಾಟ,
ಜನರ ಅನುಕೂಲಕ್ಕಾಗಿ, ಜನರ ರಕ್ಷಣೆಗಾಗಿ, ಜನರ ಭದ್ರತೆಗಾಗಿ ನಿರ್ಮಿಸುವ ಸೇತುವೆಗಳು ಜನರಿಗೆ ಅಪಾಯ ತರುವುದಾದರೆ ಅದರಿಂದ ಆಗುವ ಪ್ರಯೋಜನವಾದರೂ ಏನು. ಅದಕ್ಕಾಗಿ ಖರ್ಚು ಮಾಡುವ ಹಣವನ್ನು ವ್ಯರ್ಥ ಮಾಡುವುದಾದರೂ ಏಕೆ…..,

ಸರ್ಕಾರಗಳು ಮಾಡಬೇಕಾಗಿರುವುದು ವಿಧಾನಸಭೆ ಅಥವಾ ಸಂಸತ್ತಿನಲ್ಲಿ ಜಗಳಗಳಲ್ಲ ಅಥವಾ ಧರ್ಮ ಆಧಾರಿತ ರಾಜಕೀಯವೂ ಅಲ್ಲ ಅಥವಾ ಚುನಾವಣೆ ಗೆಲ್ಲುವ ತಂತ್ರಗಾರಿಕೆಯೂ ಅಲ್ಲ. ನಿಜಕ್ಕೂ ಸರ್ಕಾರಗಳಿಗೆ ಕಾಳಜಿ ಇದ್ದರೆ ಎಲ್ಲಾ ಕ್ಷೇತ್ರಗಳ ದಕ್ಷತೆ, ಪ್ರಾಮಾಣಿಕತೆ ಮತ್ತು ಅಭಿವೃದ್ಧಿ ಮುಖ್ಯವಾಗಬೇಕು…….,

ಸೇತುವೆಗಳನ್ನು ನಿರ್ಮಿಸಿದ್ದು ಖಾಸಗಿಯವರೋ, ಸರ್ಕಾರವೋ ಯಾರೇ ಆಗಿರಲಿ ಎಲ್ಲರೂ ಭಾರತೀಯ ಪ್ರಜೆಗಳೇ ಮತ್ತು ಎಲ್ಲರೂ ಲಾಭಕ್ಕಾಗಿಯೇ ಮಾಡುವುದು.
ಆದರೆ ಅದನ್ನು ಒಂದು ಕ್ರಮಬದ್ಧವಾಗಿ, ಪ್ರಾಮಾಣಿಕವಾಗಿ ಮಾಡಲು ಮತ್ತು ಮಾಡಿಸಲು ಸಾಧ್ಯವಾಗದೆ ಆಡಳಿತ ಮಾಡಿ ಪ್ರಯೋಜನವಾದರೂ ಏನು. ಇವರನ್ನು ಗೆಲ್ಲಿಸಲು ಇಷ್ಟೆಲ್ಲಾ ಚುನಾವಣೆಗಳನ್ನು ಮಾಡಿ ಏನು ಉಪಯೋಗ……..,

ಅನಾಗರಿಕ ಆಡಳಿತಕ್ಕೆ ಇಷ್ಟೆಲ್ಲ ಕಷ್ಟ ಪಡಬೇಕೆ, ಜಾಹೀರಾತುಗಳು ಸುಳ್ಳೇ ಅಥವಾ ಸರ್ಕಾರದ ಪ್ರಾಮಾಣಿಕತೆ ಸುಳ್ಳೇ ಅಥವಾ ತಂತ್ರಜ್ಞಾನವು ‌ಸುಳ್ಳೇ. ಏನಾದರೂ ಒಂದು ಕಾರಣ ಇರಬೇಕಲ್ಲ. ಆ ಕಾರಣವನ್ನಾದರೂ ಬೇಗ ಪತ್ತೆ ಹಚ್ಚಿ ಇನ್ನು ಮುಂದಾದರು ಈ ಸೇತುವೆಗಳು ಖುಷಿಯದಂತೆ ದಯವಿಟ್ಟು ಕ್ರಮ ಕೈಗೊಳ್ಳಿ….

ಕೇಂದ್ರ ಸರ್ಕಾರವೋ, ರಾಜ್ಯ ಸರ್ಕಾರವೋ ನಮಗೇನು. ಎಲ್ಲ ಸರ್ಕಾರಗಳು ಜನರಿಂದಲೇ ಆಯ್ಕೆಯಾಗಿರುವುದು. ಇದು ಯಾವುದೋ ಪಕ್ಷದ ಆಸ್ತಿಯಲ್ಲ. ಸಂಬಳ ಪಡೆಯುತ್ತಿದ್ದೀರಿ, ಅಧಿಕಾರದಲ್ಲಿದ್ದೀರಿ ಕೆಲಸ ಮಾಡಿ. ಇಲ್ಲದಿದ್ದಲ್ಲಿ ಇತರರಿಗೆ ಅವಕಾಶ ಮಾಡಿಕೊಡಿ……

ಪ್ರತಿನಿತ್ಯ ಸೇತುವೆ ಕುಸಿತ ಎಂಬ ಸುದ್ದಿಗಳನ್ನು ಕೇಳಲೇ ಹಿಂಸೆಯಾಗುತ್ತದೆ. ನಾವು ಯಾವ ಕಾಲದಲ್ಲಿದ್ದೇವೆ. ಏನಿದು ದುರಂತಗಳ ಸರಮಾಲೆ. ನಾಚಿಕೆಯಾಗುವುದಿಲ್ಲವೇ……,

ಭಾರತ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ, ವಿಕಸಿತ ಭಾರತ ಎಂದು ಪದೇ ಪದೇ ಹೇಳಲು ಹೇಗೆ ಸಾಧ್ಯ. ಆದ್ದರಿಂದ ಮಾಧ್ಯಮಗಳು, ಸಾರ್ವಜನಿಕರು, ರಾಜಕಾರಣಿಗಳು ಎಲ್ಲರೂ ಒಕ್ಕೊರಲಿನಿಂದ ಈ ಬಗ್ಗೆ ಧ್ವನಿ ಎತ್ತಬೇಕಿದೆ. ಜನಾಭಿಪ್ರಾಯ ಪ ರೂಪಿಸಬೇಕಿದೆ. ಇಲ್ಲದಿದ್ದರೆ ನಮ್ಮ ಬಗ್ಗೆ ನಮಗೇ ಅಸಹ್ಯ ಹುಟ್ಟಿಸುವ ಆಡಳಿತ ವ್ಯವಸ್ಥೆ ಇದು ಎಂದು ತಲೆತಗ್ಗಿಸಬೇಕಾಗುತ್ತದೆ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ. ಎಚ್. ಕೆ. 9844013068…….