ಹೀಗೊಂದು ಕನಸಿನ ದರ್ಶನ…… ದರ್ಶನ್ ಮತ್ತು ಅಂಗುಲಿಮಾಲ…..

ವಿಜಯ ದರ್ಪಣ ನ್ಯೂಸ್…

ಹೀಗೊಂದು ಕನಸಿನ ದರ್ಶನ……

ದರ್ಶನ್ ಮತ್ತು ಅಂಗುಲಿಮಾಲ…..

ಈ ಸಮಾಜದಲ್ಲಿ ಒಳ್ಳೆಯದಕ್ಕೆ ಮತ್ತು ಪರಿವರ್ತನೆಗೆ ಅವಕಾಶವಿದೆ ಎಂಬುದನ್ನು ಅಭಿಮಾನಿಗಳಿಗೆ ನೆನಪಿಸಲು……

ಅಂಗುಲಿಮಾಲ ಎಂಬ ಹಿಂಸಾ ಪ್ರವೃತ್ತಿಯ ದರೋಡೆಕೋರ ಬುದ್ದನ ಪ್ರಭಾವಕ್ಕೊಳಗಾಗಿ ಬದಲಾದ ವಿಷಯವನ್ನು ಜ್ಞಾಪಿಸುತ್ತಾ…….

ಈ ಹೊತ್ತಿನ ಕನ್ನಡದ ಸೂಪರ್ ಸ್ಟಾರ್ ಅಥವಾ ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಹೆಸರಾಗಿರುವುದು ನಟ ದರ್ಶನ್. ಅಪಾರ ಅಭಿಮಾನಿಗಳನ್ನು ಹೊಂದಿ ಕಮರ್ಷಿಯಲ್ ದೃಷ್ಟಿಯಿಂದ ಸದ್ಯ ಕನ್ನಡದ ಮೊದಲನೆಯ ಸಾಲಿನ ಸೂಪರ್ ಸ್ಟಾರ್ ನಟ. ಆ ಸಾಧನೆ ಕಡಿಮೆ ಏನು ಅಲ್ಲ. ಅದರಲ್ಲೂ ಸಿನಿಮಾದ ಕ್ರೇಜ್ ತುಂಬಾ ಆಳ ಮತ್ತು ಹುಚ್ಚುತನವಾಗಿರುವಾಗ ಮತ್ತು ಬೇರೆ ಎಲ್ಲ ಕ್ಷೇತ್ರಗಳ ಅಭಿಮಾನಕ್ಕೆ ಒಂದು ಮಿತಿ ಇದ್ದರೆ ಈ ಸಿನಿಮಾ ನಟರ ಅಭಿಮಾನಕ್ಕೆ ಮಿತಿಯೇ ಇರುವುದಿಲ್ಲ ಅಥವಾ ಅತಿರೇಕ ವಾಗಿರುತ್ತದೆ. ಪ್ರಾಣ ಬಿಡಲು ಹಿಂಜರಿಯುವುದಿಲ್ಲ……

ಈ ರೀತಿಯ ದರ್ಶನ್ ಎಂಬ ವ್ಯಕ್ತಿ ಈಗ ಒಂದು ಕೊಲೆ ಆಪಾದನೆಯ ಮೇಲೆ ಜೈಲು ಸೇರಿದ್ದಾರೆ. ಈಗಿನ ಸುದ್ದಿ ಮಾಧ್ಯಮಗಳ ವರದಿಯ ಪ್ರಕಾರ ಆತ ಬಹುತೇಕ ಕೊಲೆಯಲ್ಲಿ ನೇರವಾಗಿ ಭಾಗಿಯಾಗಿರುವ ಆರೋಪ ಮತ್ತು ಶಿಕ್ಷಿಸಲು ನ್ಯಾಯಾಲಯಕ್ಕೆ ಬೇಕಾದಷ್ಟು ಸಾಕ್ಷಿಗಳು ದೊರೆತಿವೆ ಎಂದು ಹೇಳಲಾಗುತ್ತದೆ. ಸದ್ಯಕ್ಕಂತೂ ಆತ ಜಾಮೀನಿನ ಮೇಲೆ ಬಿಡುಗಡೆಯಾಗಲು ಸಾಕಷ್ಟು ಸಮಯ ಬೇಕಾಗಬಹುದು. ಮುಂದೆ ಕೇಸ್ ಯಾವ ರೀತಿಯ ತಿರುವನ್ನು ಬೇಕಾದರೂ ಪಡೆಯಬಹುದು…..

ಹಾಗೆಂದು ದರ್ಶನ್ ಅವರ ಬದುಕು ಮುಗಿದೇ ಹೋಯಿತು ಎಂಬ ಪ್ರಶ್ನೆ ಹಲವರನ್ನು ಕಾಡಬಹುದು. ತಾಂತ್ರಿಕವಾಗಿ ಮತ್ತು ಭಾವನಾತ್ಮಕವಾಗಿ ಅವರು ಮೊದಲಿನ ಸ್ಥಾನಮಾನ ಗಳಿಸುವುದು ಕಷ್ಟ. ಸುಮಾರು 47 ವರ್ಷ ವಯಸ್ಸಿನ ಅವರು ಈ ಘಟನೆಯಿಂದ ಮತ್ತು ಈ ಕೇಸಿನಿಂದ ಹೊರಬರುವಷ್ಟರಲ್ಲಿ ಸಾಕಷ್ಟು ಹಣ್ಣುಗಾಯಿ ನೀರುಗಾಯಿ ಆಗಿರುತ್ತಾರೆ. ಅವರು ಮತ್ತೆ ತಮ್ಮ ಇಮೇಜ್ ಪಡೆದುಕೊಳ್ಳಲು ಸ್ವಲ್ಪ ಅವಕಾಶಗಳು ಸಿಗಬಹುದು. ಆದರೆ ಅವರ ಸುತ್ತಲಿನ ಜನ, ಸಲಹೆಗಾರರು, ಹಿತೈಷಿಗಳು, ಕುಟುಂಬಸ್ಥರು ಇದನ್ನು ಮಾನವೀಯತೆಯ ಹಿನ್ನೆಲೆಯಲ್ಲಿ ಮತ್ತು ವಿಶಾಲವಾದ ಅರ್ಥದಲ್ಲಿ ಗ್ರಹಿಸಿ ದರ್ಶನ್ ಅವರಿಗೆ ಸಲಹೆ ನೀಡಬೇಕಾಗುತ್ತದೆ ಅಥವಾ ದರ್ಶನ್ ಅವರೇ ತಮ್ಮೊಳಗೆ ಒಂದು ಕ್ರಾಂತಿಕಾರಿ ಬದಲಾವಣೆಗಾಗಿ ಅಂತಹದೇ ದಿಟ್ಟ ನಿರ್ಧಾರ ಮಾಡಬೇಕಾಗುತ್ತದೆ……

ಮೊದಲಿಗೆ,
ಚಾರ್ಜ್ ಶೀಟ್ ( ಆರೋಪಪಟ್ಟಿ ) ನ್ಯಾಯಾಲಯಕ್ಕೆ ಸಲ್ಲಿಕೆ ಆಗುತ್ತಿದ್ದಂತೆ ದರ್ಶನ್ ಅವರು ರೇಣುಕಾ ಸ್ವಾಮಿ ಎಂಬ ವ್ಯಕ್ತಿ ನನ್ನ ಅಭಿಮಾನಿ, ಆತನ ಕೊಲೆಯಾಗಿದೆ. ಆದ್ದರಿಂದ ಆತನ ಹೆಂಡತಿಗೆ ಒಂದಷ್ಟು ಪರಿಹಾರ ಮತ್ತು ಆಕೆ ಗರ್ಭಿಣಿಯಾಗಿರುವುದರಿಂದ ಆಕೆಗೆ ಹುಟ್ಟುವ ಮಗುವಿನ ವಿದ್ಯಾಭ್ಯಾಸದವರೆಗಿನ ಸಂಪೂರ್ಣ ಖರ್ಚು ವೆಚ್ಚಗಳನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಬಹಿರಂಗವಾಗಿ ಹೇಳಿ ಅವರಿಗೆ ಸುಮಾರು ಒಂದು ಕೋಟಿಯವರೆಗೆ ನೇರ ಸಹಾಯ ಅಥವಾ ಅಭಿಮಾನಿಗಳ ಮೂಲಕ ಮಾಡುವುದು……

ಎರಡನೆಯದಾಗಿ,
ಬಹುಶಃ ಕನಿಷ್ಠ ಆರು ತಿಂಗಳಿಂದ ಒಂದು ವರ್ಷದವರೆಗೂ ಅವರಿಗೆ ಜಾಮೀನು ಸಿಗುವ ಸಾಧ್ಯತೆ ಕಡಿಮೆ. ಈ ಅವಧಿಯಲ್ಲಿ ಅವರು ಚಿತ್ರರಂಗದ ಪ್ರತಿಭಾವಂತ ನಿರ್ದೇಶಕರನ್ನು, ಕಥೆಗಾರರನ್ನು, ನಿರ್ಮಾಪಕರನ್ನು ತಮ್ಮ ಸಹಾಯಕರ ಮೂಲಕ ಸಂಪರ್ಕಿಸಿ, ನಾನು ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ನನಗಾಗಿ ನಾಲ್ಕಾರು ಅತ್ಯುತ್ತಮ ಕಥೆಗಳನ್ನು ಸಿದ್ಧ ಮಾಡಿ. ನಾನು ಕಡಿಮೆ ಸಂಭಾವನೆಗೆ ಆ ಚಿತ್ರಗಳಲ್ಲಿ ನಟಿಸುತ್ತೇನೆ. ಜನರಿಗೆ ಮತ್ತೊಮ್ಮೆ ಒಳ್ಳೆಯ ಸಂದೇಶದ ಚಿತ್ರಗಳನ್ನು ನೀಡುವ ಮುಖಾಂತರ ಅಭಿಮಾನಿಗಳಲ್ಲಿ ಮತ್ತೆ ಪ್ರೀತಿಯ ಮನರಂಜನೆ ನೀಡಬೇಕಿದೆ ಎಂದು ಚಿತ್ರಕಥೆಯನ್ನು ಸಿದ್ಧ ಮಾಡಿಟ್ಟುಕೊಳ್ಳಬೇಕು……

ಮೂರನೆಯದಾಗಿ,
ತನ್ನ ಪತ್ನಿ ಮತ್ತು ಪ್ರೇಯಸಿಯ ಸಂಬಂಧಗಳನ್ನು ಯಥಾಸ್ಥಿತಿ ಈಗಿನಂತೆಯೇ ಮುಂದುವರಿಸಿ ಇಬ್ಬರ ನಡುವೆ ಸೌಹಾರ್ದಯುತ ಸಮನ್ವಯ ಸಾಧಿಸಿ ಅತ್ಯುತ್ತಮ ಕುಟುಂಬದ ಮುಖ್ಯಸ್ಥನಂತೆ ವರ್ತಿಸಬೇಕು……

ನಾಲ್ಕನೆಯದಾಗಿ,
ಕನ್ನಡ ಭಾಷೆ, ಕನ್ನಡ ಜಲ ಮತ್ತು ಕನ್ನಡ ಚಿತ್ರರಂಗಕ್ಕೆ ಎಷ್ಟು ಸಾಧ್ಯವೊ ಅಷ್ಟು ಸಹಾಯವನ್ನು, ಹೋರಾಟವನ್ನು ಮಾಡಬೇಕಾಗುತ್ತದೆ. ಹಿಂದಿನ ತನ್ನ ವರ್ತನೆ ಮರೆಯಾಗುವಷ್ಟು ತೀವ್ರವಾಗಿ ಪ್ರೀತಿಯಿಂದ ಆ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ. ಅದಕ್ಕಾಗಿ ತನು ಮನ ಧನಗಳ ತ್ಯಾಗದ ಅವಶ್ಯಕತೆ ಇದೆ. ಅದಕ್ಕೆ ಅವರು ಮಾನಸಿಕವಾಗಿ ಸಿದ್ದರಾಗಬೇಕು……..

ಏದನೆಯದಾಗಿ,
ಈಗ ರೇಣುಕಾ ಸ್ವಾಮಿ ಹತ್ಯೆಯ ಆರೋಪದಲ್ಲಿ ಜೈಲಿನಲ್ಲಿರುವ ಎಲ್ಲಾ 17 ಆರೋಪಿಗಳಿಗೂ ದರ್ಶನ್ ಅವರೇ ಖುದ್ದು ವಕೀಲರನ್ನು ನೇಮಿಸಿ ಅವರ ಕೇಸು ನಡೆಸಬೇಕು ಮತ್ತು ಅವರ ಕುಟುಂಬದವರಿಗೆ ಸಾಧ್ಯವಾದಷ್ಟು ಹಣಕಾಸಿನ ಸಹಾಯವನ್ನು ನೀಡಬೇಕು. ಹೀಗೆ ಮಾಡುವುದರಿಂದ ಅವರ ಮೇಲಿನ ಅಭಿಮಾನ ಹೆಚ್ಚಾಗುತ್ತದೆ ಮತ್ತು ಕೇಸಿನಲ್ಲಿ ಅವರಿಗೆ ಅನುಕೂಲವೂ ಆಗಬಹುದು……

ಆರನೆಯದಾಗಿ ಮತ್ತು ಬಹುಮುಖ್ಯವಾಗಿ,
ತಮ್ಮ ಕುಡಿತದ ಚಟವನ್ನು ಸಾಧ್ಯವಾದಷ್ಟು ಕಡಿಮೆ ಮಾಡಿಕೊಳ್ಳಬೇಕು ಅಥವಾ ರಾತ್ರಿ ಮಲಗುವಾಗ ಮಾತ್ರ ಎಂಬ ಶಿಸ್ತಿಗೆ ಸೀಮಿತಗೊಳಿಸಿಕೊಳ್ಳಬೇಕು ಅಥವಾ ಸಂಪೂರ್ಣ ತ್ಯಜಿಸಬೇಕು. ಜೊತೆಗೆ ಚಿತ್ರರಂಗದ ಸಾಮಾನ್ಯ ಪಾರ್ಟಿಗಳನ್ನು ಬಹಿಷ್ಕರಿಸಬೇಕು ಮತ್ತು ತಾನು ಆಯೋಜಿಸಬಾರದು. ಇತರರು ಆಯೋಜಿಸಿದ ಪಾರ್ಟಿಗಳಿಗೂ ಹೋಗಬಾರದು……..

ಏಳನೆಯದಾಗಿ,
ಈಗ ತಾನು ಆರೋಪಿ ಸ್ಥಾನದಲ್ಲಿ ಜೈಲಿನಲ್ಲಿ ಇರುವಾಗ ತನ್ನ ವಿರುದ್ಧ ಮಾತನಾಡಿದವರ ಅಥವಾ ತನ್ನ ಪರವಾಗಿ ನಿಂತವರ ಯಾವ ಮುಲಾಜಿಗೂ ಒಳಗಾಗದೆ ಅದೆಲ್ಲವೂ ಸಾಮಾನ್ಯ ಪ್ರತಿಕ್ರಿಯೆಗಳು ಎಂದು ನಿರ್ಲಕ್ಷಿಸಿ, ಯಾರನ್ನೂ ವಿರೋಧಿ ಎಂದು ಪರಿಗಣಿಸದೆ ತಾನಾಯಿತು ತನ್ನ ಉದ್ಯೋಗವಾಯಿತು ಎಂಬಂತೆ ತಟಸ್ಥ ನೀತಿ ಅನುಸರಿಸಿದರೆ ದರ್ಶನ್ ಅವರ ವ್ಯಕ್ತಿತ್ವ ಸ್ವಲ್ಪ ವರ್ಷಗಳ ನಂತರ ಮತ್ತೊಮ್ಮೆ ಪ್ರಜ್ವಲಿಸುವ ಎಲ್ಲ ಸಾಧ್ಯತೆಯೂ ಇರುತ್ತದೆ…….

ಎಂಟನೆಯದಾಗಿ,
ಈಗಿನ ಘಟನೆಗಳು ಅನೇಕ ಸಂಬಂಧಗಳನ್ನು ಮುರಿದು ಹಾಕಬಹುದು ಅಥವಾ ಹೊಸ ಸಂಬಂಧಗಳು ಸ್ಥಾಪಿತವಾಗಬಹುದು ಅಥವಾ ಶತ್ರುಗಳು ಮಿತ್ರರಾಗಿ ಮಿತ್ರರು ಶತ್ರುಗಳೂ ಆಗಬಹುದು. ಈ ಎಲ್ಲಾ ಸಾಧ್ಯತೆಗಳು ಇರುತ್ತದೆ. ಅದನ್ನು ಅತ್ಯಂತ ಪ್ರಬುದ್ಧವಾಗಿ, ಸ್ಥಿತಪ್ರಜ್ಞತೆಯಿಂದ ಸ್ವೀಕರಿಸಿ, ತನ್ನ ವೃತ್ತಿಯ ಬಗ್ಗೆ ಮಾತ್ರ ಹೆಚ್ಚು ಗಮನ ಕೇಂದ್ರೀಕರಿಸಿ, ಉಳಿದಂತೆ ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಹೊಂದಿ ಹೊಸ ವ್ಯಕ್ತಿತ್ವ ಬೆಳೆಸಿಕೊಳ್ಳಲು ಪ್ರಯತ್ನಿಸಿದರೆ ಖಂಡಿತವಾಗಲೂ ದರ್ಶನ್ ಅವರ ಬದುಕಿನಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಬಹುದು…..

ಈಗಿನ ಸಂದರ್ಭದಲ್ಲಿ ಅದು ಅಷ್ಟು ಸುಲಭವಲ್ಲ. ಸಮಾಜವು ಅದನ್ನು ಅಷ್ಟು ಸುಲಭವಾಗಿ ಸ್ವೀಕರಿಸುವುದೂ ಇಲ್ಲ. ಮಾಧ್ಯಮಗಳು ತಮ್ಮ ಕಠಿಣ ನಿಲುವುಗಳಿಂದ ಉದ್ರೇಕಕಾರಿ ವಿಷಯಗಳನ್ನೇ ಪ್ರಸಾರ ಮಾಡುತ್ತವೆ. ಎಲ್ಲವನ್ನು ಮೀರುವ ಮಾನಸಿಕ ಸ್ಥಿತಿಗೆ ಹೋಗುವ ಒಂದು ಸುವರ್ಣ ಅವಕಾಶ ಈಗ ಜೈಲಿನಲ್ಲಿರುವ ದರ್ಶನ್ ಗೆ ಇದೆ. ಈ ಎಲ್ಲವೂ ಒಂದು ಸಾಧ್ಯತೆಗಳು ಮಾತ್ರ. ಆ ವ್ಯಕ್ತಿ ಈ ಘಟನೆಯಿಂದ ಕಲಿಯಬಹುದಾದ ಕೆಲವು ಒಳ್ಳೆಯ ಪಾಠಗಳು. ಇದನ್ನು ಮೀರಿ ಅವರಿಗೆ ತಮ್ಮ ಬದುಕನ್ನು ತಾವೇ ಪುನರ್ ಸ್ಥಾಪಿಸಿಕೊಳ್ಳುವ ಸ್ವಾತಂತ್ರ್ಯವೂ, ಬುದ್ಧಿಶಕ್ತಿಯೂ ಇರುತ್ತದೆ. ಆದರೆ ದಿಕ್ಕು ಮಾತ್ರ ಮಾನವೀಯವಾಗಿರಲಿ ಪ್ರಗತಿಪರವಾಗಿರಲಿ, ನೈತಿಕವಾಗಿರಲಿ ಎಂದು ನಾವು ಆಶಿಸಬಹುದಷ್ಟೇ…….

ಏಕೆಂದರೆ ಅಂತಹ ಒಬ್ಬ ಸೂಪರ್ ಸ್ಟಾರ್ ನಟ ಸದ್ಯಕ್ಕೆ ವಿಲನ್ ಆಗಿರುವಾಗ ಮತ್ತೊಮ್ಮೆ ಜನರ ಮನಸ್ಸಿನಲ್ಲಿ ನಾಯಕ ಆಗಬೇಕೆಂದರೆ ಈ ರೀತಿಯ ದಿಟ್ಟ, ತ್ಯಾಗ, ಕರುಣೆ, ಕ್ಷಮಾಗುಣದ ನಿರ್ಧಾರಗಳ ಅವಶ್ಯಕತೆ ಇರುತ್ತದೆ ಎಂಬುದು ನಮ್ಮ ಭಾವನೆ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ. ಎಚ್. ಕೆ. 9844013068………