ನಾಡಪ್ರಭು ಕೆಂಪೇಗೌಡ  ದೂರದೃಷ್ಟಿ ನಾಯಕ

ವಿಜಯ ದರ್ಪಣ ನ್ಯೂಸ್….

ನಾಡಪ್ರಭು ಕೆಂಪೇಗೌಡ  ದೂರದೃಷ್ಟಿ ನಾಯಕ

ವಿಜಯಪುರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ : ವಿಜಯಪುರ ಪುರಸಭೆ ಸಭಾಂಗಣದಲ್ಲಿ ಗುರುವಾರ  ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಆಚರಣೆ ನಡೆಯಿತು. ಒಕ್ಕಲಿಗ ಸಮುದಾಯದ ಮುಖಂಡರು ಹಾಗೂ ಪುರಸಭೆ ಅಧಿಕಾರಿಗಳು, ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಪುರಸಭೆ ಮುಖ್ಯಾಧಿಕಾರಿ ಜಿ.ಆರ್.ಸಂತೋಷ್ ಮಾತನಾಡಿ, ಆಡಳಿತ ವ್ಯವಸ್ಥೆ ಕಾರ್ಯವೈಖರಿ ಹೇಗಿರಬೇಕು. ಈ ನಾಡನ್ನು ಹೇಗೆ ಕಟ್ಟಬೇಕು. ಎನ್ನುವ ಬಗ್ಗೆ ಕೆಂಪೇಗೌಡರು ಸ್ವತಃ ಆಳ್ವಿಕೆ ಮಾಡುವ ಮೂಲಕ ಮಾದರಿ ಆಗಿದ್ದಾರೆ.

ಅವರು ಒಂದು ಸಮುದಾಯಕ್ಕೆ ಸೀಮಿತವಾಗಿರುವ ನಾಯಕರಲ್ಲ. ಅವರು ನಮ್ಮೆಲ್ಲರ ಆಸ್ತಿಯಾಗಬೇಕು. ಅವರು ಸ್ಥಾಪನೆ ಮಾಡಿರುವ ಬೆಂಗಳೂರು ವಿಶ್ವದ ಎಲ್ಲ ದೇಶಗಳ ಜನರಿಗೆ ಆಶ್ರಯ ನೀಡಿದೆ. ಅವರ ಆದರ್ಶ ಮೈಗೂಡಿಸಿಕೊಂಡು ನಾವೆಲ್ಲರೂ ಸಾಗಬೇಕು ಎಂದರು.

ಪುರಸಭೆ ಸದಸ್ಯ ವಿ.ನಂದಕುಮಾರ್ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಆಡಳಿತಾತ್ಮಕ ಕೌಶಲಗಳಿಗೆ ಹೆಸರುವಾಸಿಯಾಗಿದ್ದರು. ಬೆಂಗಳೂರು ಕಟ್ಟಿದ್ದಾರೆ. ವಿಜಯನಗರ ಸಾಮ್ರಾಜ್ಯದಲ್ಲಿ ಸಾಮಂತನಾಗಿದ್ದ, ಅವರು ಕಟ್ಟಿದ ಬೆಂಗಳೂರು ಜಗತ್ತಿನ ಗಮನ ಸೆಳೆದಿದೆ. ಅವರು ಕಟ್ಟಿದ ಬೆಂಗಳೂರು ಮಾತ್ರವಲ್ಲದೆ ಸುತ್ತಮುತ್ತಲಿನ ಹಳ್ಳಿಗಳು ಅಭಿವೃದ್ಧಿಯಾಗಿವೆ. ಅನೇಕ ಕೆರೆಗಳನ್ನು ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕೋಟೆಗಳು ಇಂದಿಗೂ ಗಮನ ಸೆಳೆಯುತ್ತಿವೆ. ಕೃಷಿ, ಶಿಕ್ಷಣ, ಎಂಜಿನಿಯ‌ರ್, ವಾಣಿಜ್ಯೋದ್ಯಮ, ವೈದ್ಯ, ತಂತ್ರಜ್ಞಾನಿ, ದಾರ್ಶನಿಕ, ಸಂತನಾಗಿ ಬೆಳೆದಿದ್ದಾರೆ. ಅವರನ್ನು ಸ್ಮರಣೆ ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಒಕ್ಕಲಿಗ ಸಮುದಾಯದ ಮುಖಂಡ ಎಂ.ವೀರಣ್ಣ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಉತ್ತಮ ಆಡಳಿತಗಾರರು ಮಾತ್ರವಲ್ಲದೆ ಯುದ್ಧಕಲೆಯಲ್ಲಿ ಪರಿಣಿತಿ ಪಡೆದಿದ್ದರು. ಅವರು ಹಾಕಿ ಕೊಟ್ಟಿರುವ ಹಾದಿಯಲ್ಲಿ ಪ್ರತಿಯೊಬ್ಬರೂ ಸಾಗಬೇಕಾಗಿದೆ. ಅವರೊಬ್ಬರು ದೂರದೃಷ್ಟಿ ನಾಯಕರಾಗಿದ್ದು, ಅವರ ಕಾಲದಲ್ಲಿ ಎಲ್ಲ ಸಮುದಾಯಗಳಿಗೂ ಅವರವರ ಕಸುಬಿಗೆ ಅನುಗುಣವಾಗಿ ಒಂದೊಂದು ಪೇಟೆ ನಿರ್ಮಾಣ ಮಾಡಿಕೊಟ್ಟಿರುವುದು ಇದಕ್ಕೆ ನಿದರ್ಶನ ಎಂದರು.

ಪುರಸಭೆ ಸದಸ್ಯ ಬೈರೇಗೌಡ ಮಾತನಾಡಿ, ನಾಡಪ್ರಭು ಕೆಂಪೇಗೌಡರು, ಎಲ್ಲ ಕಸುಬುದಾರರಿಗೆ ಒಂದೊಂದು ಪೇಟೆ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಆದರೆ, ಒಕ್ಕಲುತನ ಮಾಡುವ ಒಕ್ಕಲಿಗರಿಗೆ ಪ್ರತ್ಯೇಕವಾಗಿ ಪೇಟೆ ಕಟ್ಟಲಿಲ್ಲ. ಬದಲಿಗೆ ಒಕ್ಕಲಿಗರು ಎಲ್ಲರನ್ನೂ ಸಲಹುವವರನ್ನಾಗಿ ಮಾಡಿದ್ದಾರೆ. ಎಲ್ಲರಿಗೂ ಅನ್ನಕೊಡುವುದು ನಮ್ಮ ಕಾಯಕ ಎಂದರು.

ಪುರಸಭೆ ಸದಸ್ಯರಾದ ಸಿ.ನಾರಾಯಣಸ್ವಾಮಿ, ರವಿ, ಎಂ.ಕೇಶವಪ್ಪ, ಎ.ಆ‌ರ್.ಹನೀಪುಲ್ಲಾ, ಸಿ.ಎಂ.ರಾಮು, ಎಂ.ರಾಜಣ್ಣ, ಶ್ರೀರಾಮಪ್ಪ, ಮುಖಂಡರಾದ ಪ್ರಕಾಶ್, ಮಹಬೂಬ್ ಪಾಷ, ಸೈಪುಲ್ಲಾ, ಒಕ್ಕಲಿಗರ ಸಂಘದ ಅಧ್ಯಕ್ಷ ಬಚ್ಚೇಗೌಡ, ವಿ.ಎಂ.ನಾಗರಾಜ್, ವೆಂಕಟೇಶ್, ಮಹೇಶ್ ಕುಮಾ‌ರ್, ಮುನಿರಾಜು, ತೋಟದಪ್ಪ, ಮಂಜುನಾಥ್, ರಾಘವೇಂದ್ರ, ಕಿರಣ್, ಅಧಿಕಾರಿಗಳಾದ ಶಿವನಾಗೇಗೌಡ, ಲಿಂಗಣ್ಣ, ಎಂಜಿನಿಯರ್ ಶೇಖ‌ರ್, ಸುನೀಲ್, ಪವನ್ ಜ್ಯೋಷಿ, ಇದ್ದರು.