ಬರಗಾಲದ ಸಂದರ್ಭದಲ್ಲಿ ಜಾನುವಾರುಗಳ ನಿರ್ವಹಣೆ 

ವಿಜಯ ದರ್ಪಣ ನ್ಯೂಸ್ 

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ನವೆಂಬರ್ 18 : ಬರಗಾಲವು ಸಾಮಾನ್ಯವಾಗಿ ಉತ್ಪಾದನೆಯ ಚಕ್ರದಲ್ಲಿ ಒಣಹವೆಯ ವಾತಾವರಣವಾಗಿದ್ದು, ಮಳೆಯ ಪ್ರಮಾಣ ವಾರ್ಷಿಕ ಸರಾಸರಿಗಿಂತ ಕಡಿಮೆಯಾಗಿರುವುದರಿಂದ, ಕಾಳು ಕಟ್ಟುವ ಸಂದರ್ಭದಲ್ಲಿ ಮಣ್ಣಿನ ತೇವಾಂಶ ಕಡಿಮೆ ಇರುವುದರಿಂದ ಮತ್ತು ಕೆರೆ-ಕುಂಟೆಗಳಲ್ಲಿ ನೀರು, ಹರಿಯುವ ನೀರು, ಅಂತರ್ಜಲದ ನೀರಿನ ಮಟ್ಟ ಕಡಿಮೆಯಾಗುವುದರಿಂದ ಸಂಭವಿಸಬಹುದಾಗಿದೆ.

ಇದು ಜಾನುವಾರು ಮತ್ತು ಜನರ ಆಹಾರ ಭದ್ರತೆಯ ಮೇಲೆ ಹಾಗೂ ರೈತರ ಆರ್ಥಿಕ ಮೂಲದ ಮೇಲೆ ನೇರ ಪರಿಣಾಮ ಬೀರುವುದರಿಂದ ಬರದ ನಿರ್ವಹಣೆ ಅತಿ ಮುಖ್ಯದ್ದಾಗಿದೆ.

ಒಣಹವೆ ಮತ್ತು ಮೇವಿನ ಕೊರತೆಯಿಂದಾಗಿ ಜಾನುವಾರುಗಳ ಹಾಲು, ಮಾಂಸ, ಮೊಟ್ಟೆ ಮತ್ತು ಉಣ್ಣೆ ಉತ್ಪಾದನೆಯಲ್ಲಿ ಕುಂಠಿತವಾಗುವುದು. ಕಲುಷಿತ ನೀರು, ಪೋಷಕಾಂಶಗಳ ಕೊರತೆಯಿಂದ ರೋಗನಿರೋಧಕ ಶಕ್ತಿ ಕುಂದುವುದರೊಂದಿಗೆ ರೋಗಗಳ ಉಲ್ಬಣದಿಂದಾಗಿ ಜಾನುವಾರುಗಳ ಸಾವು ಸಂಭವಿಸಬಹುದು. ಅಸಂಪ್ರದಾಯಕ ಮೇವಿನ ಸೇವನೆಯಿಂದ Nitrate, Cyanide (Prussic acid) ವಿಷಭಾದೆಯಿಂದ ಸಾವು ಸಂಭವಿಸುತ್ತದೆ. ಗರ್ಭಧರಿಸಿದ ಜಾನುವಾರುಗಳಲ್ಲಿ ಗರ್ಭಪಾತದೊಂದಿಗೆ ಸಂತಾನೋತ್ಪತ್ತಿ ಕುಂಠಿತವಾಗುತ್ತದೆ. ಈ ಕಾರಣಗಳಿಂದ ಜಾನುವಾರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದು ರೈತರಿಗೆ ಅನಿವಾರ್ಯವಾಗುತ್ತದೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ರೈತರ ಆಹಾರ ಮತ್ತು ಆರ್ಥಿಕ ಭದ್ರತೆಗೆ ಧಕ್ಕೆಯಾಗುತ್ತದೆ.

ಬರ ನಿರ್ವಹಣೆಯಲ್ಲಿ ಪ್ರಮುಖವಾಗಿ ಕೈಗೊಳ್ಳಬೇಕಾದ ಕ್ರಮಗಳು

ಲಭ್ಯವಿರುವ ಹಸಿರು ಮೇವನ್ನು ಒಣಗಿಸಿ ಹುಲ್ಲನ್ನು (Hay) ಮತ್ತು ರಸಮೇವಿನ (Sailage) ರೂಪದಲ್ಲಿ ಸಂಗ್ರಹಿಸಬೇಕು. ಮೇವು ಕತ್ತರಿಸುವ ಯಂತ್ರವನ್ನು ಉಪಯೋಗಿಸಿ ಮೇವು ಪೋಲಾಗದಂತೆ ನೋಡಿಕೊಳ್ಳಬೇಕು. ಕೃಷಿ ತ್ಯಾಜ್ಯಗಳನ್ನು ಸುಡದೇ ಸಂಗ್ರಹಿಸಿ ಮೇವಾಗಿ ಬಳಸುವುದು. ಭತ್ತ, ರಾಗಿ ಕೊಯ್ಲು ಸಂದರ್ಭದಲ್ಲಿ ಬುಡಕ್ಕೆ ಹತ್ತಿರ ಕಟಾವು ಮಾಡಿ ಹುಲ್ಲನ್ನು ಸಂಗ್ರಹಿಸುವುದು. ಸಾಧ್ಯವಾದಷ್ಟು ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವುದು. ಹೆಚ್ಚು ತಾಪಮಾನವಿರುವ ಸಮಯದಲ್ಲಿ ನೀರನ್ನು ಜಾನುವಾರುಗಳ ಮೇಲೆ ಸಿಂಪಡಿಸುವುದು. ಎಳೆಯ (ಬಲಿಯದ) ಹಸಿಮೇವನ್ನು ನೀಡುವುದರಿಂದ ವಿಷಬಾಧೆಯಾಗುವುದನ್ನು ತಪ್ಪಿಸಲು 5-6 ದಿನಗಳ ಕಾಲ ಚೆನ್ನಾಗಿ ಒಣಗಿಸಿ ನೀಡುವುದು ಮತ್ತು ಸಂಗ್ರಹಿಸುವುದು. ಅಸಂಪ್ರದಾಯಕ ಮೇವುಗಳಿಂದಾಗಬಹುದಾದ ವಿಷಬಾಧೆಯನ್ನು ತಪ್ಪಿಸಲು ಸ್ಥಳೀಯ ಪಶುವೈದ್ಯರ ಸಲಹೆಯ ಮೇರೆಗೆ 6 ಸಾಂಪ್ರದಾಯಕ ಮೇವುಗಳನ್ನು ಬಳಸುವುದು. ವಯಸ್ಕ ಹಸು ಮತ್ತು ಎಮ್ಮೆಗಳಿಗೆ 6 ಕೆ.ಜಿ ಒಣಮೇವು (20-30 ಲೀ ನೀರು), ಕುರಿ ಮತ್ತು ಮೇಕೆಗಳಿಗೆ 0.5 ಕೆ.ಜಿ. ಮೇವಿನ (3-5 ಲೀ. ನೀರು) ಸಂಪೂರ್ಣ ಆಹಾರ ನೀಡುವುದು. ಜಾನುವಾರುಗಳಿಗೆ ಆಹಾರ ನೀಡುವ ಪದ್ಧತಿಗಳಲ್ಲಿ ಸುಧಾರಿತ ಮತ್ತು ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು. ಹುಲ್ಲು ಮತ್ತು ರಸಮೇವಿನ ರೂಪದಲ್ಲಿ ಮೇವು ಸಂಗ್ರಹಣೆ. ಒಣ ಮೇವಿನ ಯೂರಿಯ ಪೌಷ್ಟಿಕರಣೆ. Urea Mollasess mineral black licker ಉಪಯೋಗಿಸುವುದು. TMR Blocks ಬಳಕೆ ಮಾಡುವುದು. Azolla & Hydrophonic ಬೆಳೆಯುವುದನ್ನು ರೂಢಿಸಿಕೊಳ್ಳುವುದು. Silvi-pasture & Horti-pasture ಅಳವಡಿಕೆ. ನೀರಾವರಿ ಇರುವ ಪ್ರದೇಶಗಳಲ್ಲಿ ಮೇವಿನ ಬೆಳೆಗಳ ಉತ್ಪಾದನೆ ಮಾಡಬೇಕು.

(ಪ್ರಕಟಣೆ: ಉಪ ನಿರ್ದೇಶಕರು (ಆಡಳಿತ)
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ)

@@@@@@@@@@@@@@@@@@@@@

ಜಿಲ್ಲೆಯಲ್ಲಿ ಕುಡಿಯುವ ನೀರು, ಮೇವು ಸಮಸ್ಯೆ ಕಂಡುಬಂದರೆ ಶೀಘ್ರ ಸ್ಪಂದಿಸಿ: ಜಿಲ್ಲಾಧಿಕಾರಿ ಡಾ. ಶಿವಶಂಕರ್.

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ನವೆಂಬರ್. 18 :ಜಿಲ್ಲೆಯ ನಾಲ್ಕು ತಾಲ್ಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದ್ದು, ಸಾರ್ವಜನಿಕರಿಗೆ ತುರ್ತು ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಆಹಾರ, ಮೇವುಗಳ ಲಭ್ಯತೆಯ ಅಭಾವ ಕಂಡುಬಂದಲ್ಲಿ ಶೀಘ್ರ ಸ್ಪಂದಿಸಿ ಬಗೆಹರಿಸುವಂತೆ ಜಿಲ್ಲಾಧಿಕಾರಿ ಡಾ.ಎನ್. ಶಿವಶಂಕರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಜಿಲ್ಲಾ ಕಛೇರಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೇಲ್ವಿಚಾರಣೆಯಲ್ಲಿ 2023 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬರ ವಿಪತ್ತು ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‌‌ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಪರ್ಯಾಯವಾಗಿ ನೀರು ಪೂರೈಸುವ ಕೊಳವೆ ಬಾವಿಗಳನ್ನು ಗುರುತಿಸಿ, ಅವಶ್ಯವಿದ್ದಲ್ಲಿ ಖಾಸಗಿ ಕೊಳವೆ ಬಾವಿಗಳ ಮೂಲಕ ಹಾಗೂ ಟ್ಯಾಂಕರ್ ಗಳ ಮೂಲಕ ನೀರನ್ನು ಪೂರೈಸಲು ಸಿದ್ಧತೆ ಮಾಡಿಕೊಳ್ಳಿ ಎಂದರು.

ಬರದ ಹಿನ್ನೆಲೆಯಲ್ಲಿ ಜಾನುವಾರಗಳ ಆಹಾರ ಮತ್ತು ಮೇವುಗಳಿಗೆ ತೊಂದರೆ ಉಂಟಾಗಬಹುದಾದ ಹಿನ್ನೆಲೆಯಲ್ಲಿ ಜಾನುವಾರಗಳ ಗಣತಿಯನ್ನು ಆಧರಿಸಿ ಮೇವು ಕಿಟ್ ಗಳನ್ನು ಅಗತ್ಯ ಇರುವ ಸ್ಥಳಗಳಿಗೆ ಪೂರೈಸಲು ಕ್ರಮ ವಹಿಸಲು ಪಶು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್, ದೊಡ್ಡಬಳ್ಳಾಪುರ ತಾಲ್ಲೂಕು ತಹಸೀಲ್ದಾರ್ ವಿದ್ಯಾ ವಿಭಾ ರಾಥೋಡ್, ದೇವನಹಳ್ಳಿ ತಾಲ್ಲೂಕು ತಹಸೀಲ್ದಾರ್ ಶಿವರಾಜ್, ನೆಲಮಂಗಲ ತಾಲ್ಲೂಕು ತಹಸೀಲ್ದಾರ್ ಅರುಂಧತಿ, ದೊಡ್ಡಬಳ್ಳಾಪುರ ಕಾರ್ಯ ನಿರ್ವಾಹಕ ಅಧಿಕಾರಿ ಮುನಿರಾಜು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.