ಊಹೆಗೂ ಮೀರಿದ ಮಾನವ ಇತಿಹಾಸ ಮತ್ತು ಭವಿಷ್ಯ……
ವಿಜಯ ದರ್ಪಣ ನ್ಯೂಸ್…
ಊಹೆಗೂ ಮೀರಿದ ಮಾನವ ಇತಿಹಾಸ ಮತ್ತು ಭವಿಷ್ಯ……
ವರ್ತಮಾನದ ನಾವು ಅದೃಷ್ಟಶಾಲಿಗಳಲ್ಲವೇ……
ಪ್ರಾಣಿಗಳಿಗೂ ದಯಾ ಸಂಘಗಳು ಪ್ರಬಲವಾಗಿರುವ ಈ ಸಂಧರ್ಭದಲ್ಲಿ ಮನುಷ್ಯನೂ ಮಾರಾಟವಾಗುತ್ತಿದ್ದ ದಿನಗಳನ್ನು ನೆನಪಿಸಿಕೊಂಡಾಗ………
ಬಹಳ ಹಿಂದೆ ಏನೂ ಅಲ್ಲ. ಕೇಲವೇ ಶತಮಾನಗಳ ಹಿಂದೆ ಕುರಿ ಕೋಳಿ ಹಸು ನಾಯಿ ಕತ್ತೆ ಕುದುರೆಗಳ ರೀತಿಯಲ್ಲಿ ಮನುಷ್ಯನನ್ನು ಸಹ ಬೀದಿ ಬದಿಯಲ್ಲಿ ಮಾರಾಟಕ್ಕೆ ನಿಲ್ಲಿಸಲಾಗುತ್ತಿತ್ತು.
ನಮ್ಮ ಗ್ರಾಮೀಣ ಪ್ರದೇಶದ ದನಗಳ ಜಾತ್ರೆಯಲ್ಲಿ ಅವುಗಳನ್ನು ಕೊಳ್ಳುವವರು ಅದರ ಹಲ್ಲಿನಿಂದ ಹಿಡಿದು ದೇಹದ ಸಂಪೂರ್ಣ ಅಂಶಗಳನ್ನು ಪರಿಶೀಲಿಸಿ ಅದಕ್ಕೆ ಬೆಲೆ ಕಟ್ಟುತ್ತಾರೆ. ಮನುಷ್ಯರಲ್ಲೂ ಗಂಡು ಹೆಣ್ಣು ಇಬ್ಬರನ್ನೂ ಇದೇ ರೀತಿ ಪರಿಶೀಲಿಸಿ ಅವರ ದೈಹಿಕ ಸಾಮರ್ಥ್ಯಕ್ಕೆ ತಕ್ಕಂತೆ ಬೆಲೆ ನಿಗದಿಪಡಿಸಿ ಗುಂಪುಗಳಾಗಿ ವ್ಯಾಪಾರ ಮಾಡಿ ಸಾಗಿಸಲಾಗುತ್ತಿತ್ತು.
ಬಲಿಷ್ಠವಾದ ದೇಹದವರನ್ನು ಭೇಟೆಯಾಡಿ, ಆಯುಧಗಳಿಂದ ಗಾಯ ಮಾಡಿ ಕಬ್ಬಿಣದ ಸರಪಳಿಗಳಿಂದ ಬಂಧಿಸಲಾಗುತ್ತಿತ್ತು.
ಹೀಗೆ ಬಂಧಿಸಿದ ನೂರಾರು ಜನರನ್ನು ವ್ಯಾಪಾರಿಗಳು ಖರೀದಿಸಿ ನಡೆಸಿಕೊಂಡು ಅಥವಾ ಹಡಗಿನಲ್ಲಿ ಕುರಿಗಳಂತೆ ತುಂಬಿ ತಿಂಗಳು ಗಟ್ಟಲೆ ಪ್ರಯಾಣ ಮಾಡಿ ದೂರದ ಪ್ರದೇಶಗಳಿಗೆ ಕರೆದೊಯ್ಯುತ್ತಿದ್ದರು. ಆಗಿನ ಕಾಲದ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ನೀಡುತ್ತಿದ್ದರು. ಆ ಗುಂಪಿನಲ್ಲಿ ಯಾರಾದರೂ ಅನಾರೋಗ್ಯದಿಂದ ಸಾವನ್ನಪ್ಪಿದರೆ ಸಮುದ್ರಕ್ಕೆ ಎಸೆಯುತ್ತಿದ್ದರು. ಅದು ಜಲಚರಗಳಿಗೆ ಆಹಾರವಾಗುತ್ತಿತ್ತು.
ಇವರನ್ನು ಗುಲಾಮರೆಂದು ಕರೆಯಲಾಗುತ್ತಿತ್ತು. ವಿಶ್ವದ ಕೆಲವು ಕಡೆ ಈ ರೀತಿಯ ವ್ಯವಸ್ಥೆ ಇದ್ದರೂ ಇದರ ಅತ್ಯಂತ ಹೆಚ್ಚು ಧಾರುಣ ಕಥೆಗಳು ಕಂಡುಬರುವುದು ಆಫ್ರಿಕಾ ಆದಿವಾಸಿಗಳಾದ ಕಪ್ಪು ಜನರಲ್ಲಿ. ಅವರನ್ನು ಮುಖ್ಯವಾಗಿ ಯೂರೋಪ್ ಮತ್ತು ಅಮೆರಿಕಾಗಳಿಗೆ ರಪ್ತು ಮಾಡಲಾಗುತ್ತಿತ್ತು.
ಯಾವ ಕಾನೂನು, ಮಾನವ ಹಕ್ಕುಗಳು, ದಯಾ ಸಂಘಟನೆಗಳು ಆಗ ಇರಲಿಲ್ಲ. ಇದ್ದರೂ ಕೇಳುವವರಾರು !!?
ಗೆಳೆಯರೆ,
ಅಭಿವ್ಯಕ್ತಿ ಸ್ವಾತಂತ್ರ್ಯ ಮೀರಿ ಸ್ವೇಚ್ಚಾ ಸಮಾಜದಲ್ಲಿ ವಾಸಿಸುತ್ತಿರುವ ನಾವು ಒಮ್ಮೆ ಇದನ್ನು ನೆನಪಿಸಿಕೊಳ್ಳೋಣ.
ಮೈ ನಡುಗುತ್ತದೆ,
ಮನಸ್ಸು ಕದಡುತ್ತದೆ,
ಹೃದಯ ಕಲಕುತ್ತದೆ,
ರೋಷ ಉಕ್ಕುತ್ತದೆ.
ರಕ್ತ ಕುದಿಯುತ್ತದೆ.
ಈಗ ಇದು ಇತಿಹಾಸವೆಂಬುದು ನಿಜ. ಆದರೆ ಈ ಇತಿಹಾಸದ ಘಟನೆ ನಮಗೆ ಪಾಠವಾಗಬಾರದೆ……
ನಮ್ಮಲ್ಲಿ ವಿನಯ, ಸಭ್ಯತೆ, ಮಮತೆ, ಕರುಣೆ ಹುಟ್ಟಿಸಬಾರದೆ,
ಸಹಕಾರ, ಸಮನ್ವಯ, ಸಂಸ್ಕಾರ ಬೆಳೆಸಬಾರದೆ,
ಬಹುತೇಕ ಎಲ್ಲಾ ಅನುಕೂಲಗಳು, ಪೋಲೀಸ್, ಕಾನೂನು, ನ್ಯಾಯಾಲಯ, ಮಾಧ್ಯಮ, ಪ್ರಜಾಪ್ರಭುತ್ವ ಎಲ್ಲವೂ ನಮಗಾಗಿ ಇರುವಾಗ ಕನಿಷ್ಠ ಉತ್ತಮ ನಾಗರಿಕರಾಗಿ ಬಾಳಬಾರದೆ,
ಇಷ್ಟೊಂದು ಶಿಕ್ಷಣ ಸಂಪರ್ಕ ತಂತ್ರಜ್ಞಾನದ ಸೌಕರ್ಯಗಳು ಇದ್ದರೂ ನಾವುಗಳು ಇನ್ನೂ ಕೆಲಸಕ್ಕೆ ಬಾರದ ಏನೇನೂ ವಿಷಯಗಳಿಗೆ ಅಸಹನೆ ಅತೃಪ್ತಿ ವ್ಯಕ್ತಪಡಿಸುತ್ತಾ, ಒಬ್ಬರಿಗೊಬ್ಬರು ಅಸೂಯೆ ಪಡುತ್ತಾ, ಬೆನ್ನಿಗೆ, ಹೃದಯಕ್ಕೆ ಚೂರಿ ಹಾಕುತ್ತಾ ಅನಾಗರಿಕರಂತೆ ಬದುಕುತ್ತಿದ್ದೇವೆ.
ಇದು ಸರಿಯೇ….????
ಗುಲಾಮಿತನದಿಂದ ಮತದಾರ ಪ್ರಭುವಾಗಿ ಬದಲಾಗಿರುವ ನಾವು ಇನ್ನಾದರೂ ವಿವೇಚನೆಯಿಂದ ಜೀವನ ಸಾಗಿಸೋಣ. ದಯವಿಟ್ಟು ಇಂದಿನಿಂದಲೇ ಸಾಧ್ಯವಾದಷ್ಟು ಒಳ್ಳೆಯ ನಡತೆಯ ನಾಗರಿಕರಾಗಿ ವರ್ತಿಸೋಣ.
ಅಂದಿನ ದಿನಗಳನ್ನು ನೆನೆದು ಇಂದಿನ ಪರಿಸ್ಥಿತಿಗೆ ಹೆಮ್ಮೆ ಪಡೋಣ.
ಇಲ್ಲದಿದ್ದರೆ………
ಬನ್ನಿ ನೊಂದವರೆ ನನ್ನೊಂದಿಗೆ,
ಸಪ್ತ ಸಾಗರದಾಚೆಯ ನಾಡಿಗೆ,
ಸಿಹಿ ನೀರ ಸರೋವರದ ಮಧ್ಯದ ಬೀಡಿಗೆ…………..
ಈ ಭೂಮಿಯೇನು ಇವರಪ್ಪನದಲ್ಲ,
100×100 ಸೈಟುಗಳೇ ಭೂಮಿಯಲ್ಲ,
ನಾಮ ಬುರ್ಖಾ ಕ್ರಾಸ್ ಗಳೇ ಧರ್ಮಗಳಲ್ಲ,
ಬೃಹತ್ ಬಂಗಲೆಗಳೇ ನೆಮ್ಮದಿಯ ತಾಣವಲ್ಲ,
ಶ್ರೀಮಂತಿಕೆಯೇ ಬದುಕಿನ ಸತ್ಯವಲ್ಲ,
ಶಾಸ್ತ್ರ ಸಂಪ್ರದಾಯಗಳೇ ಬದುಕಲ್ಲ,
ನೀತಿ ನಿಯಮಗಳೇ ಜೀವನವಲ್ಲ………….
ನಾವೇನು ಕಳ್ಳರಲ್ಲ,
ದಟ್ಟ ಕಾಡಿನ ಸ್ವಚ್ಚ ಗಾಳಿಯ ಮುಗ್ಧ ಮನಸಿನ ನಾಡಿಗೆ ಹೋಗೋಣ,
ನೀವು ಹಾಡಿದ್ದೇ ಹಾಡು ಕುಣಿದದ್ದೇ ನೃತ್ಯ,
ನಿಮ್ಮ ಹೆಸರನ್ನೂ ಕೇಳುವುದಿಲ್ಲ, ಭಾವನೆಗಳನ್ನು ಕೆದಕುವುದಿಲ್ಲ……….
ಮರದ ಹಣ್ಣು, ಗಿಡದ ತರಕಾರಿ, ನೆಲದ ಗೆಡ್ಡೆಗಳು,
ತಣ್ಣನೆಯ ಗಾಳಿ ಗಿರಿ ಮಡಿಲ ನೀರು ಉಣಬಡಿಸುವೆ,
ಕೆಮ್ಮು ನೆಗಡಿಗಳಿಲ್ಲ, ರೋಗರುಜಿನಗಳಿಲ್ಲ………
ಹುಣ್ಣಿಮೆಯ ಬೆಳಕು, ಅಮವಾಸ್ಯೆಯ ಕತ್ತಲೆ,
ಭೋರ್ಗರೆವ ಮಳೆ,
ಹಿಮ ರಾಶಿಯ
ಸೌಂದರ್ಯ ಸವಿಯೋಣ ಬನ್ನಿ,
ಬೇಸರವಿಲ್ಲ, ಕೋಪವಿಲ್ಲ, ದ್ವೇಷವಿಲ್ಲ,
ಪ್ರತಿಕ್ಷಣವೂ ಬದುಕಿನೊಂದಿಗೆ ಸರಸ ಸಲ್ಲಾಪವೇ ಎಲ್ಲಾ……….
ಕಿಡ್ನಿ ಕದಿಯುವವರಿಲ್ಲ,
ಹಣ ದೋಚುವವರಿಲ್ಲ,
ನಿನಗಷ್ಟೇ ಬೆಲೆ ಉಳಿದದ್ದು ಲೆಕ್ಕಕ್ಕೇ ಇಲ್ಲ,
ಬಟ್ಟೆಯ ಹಂಗಿಲ್ಲ, ಅಶ್ಲೀಲತೆಯ ಸೋಂಕಿಲ್ಲ,
ಬಹುಮಾನವೂ ಇಲ್ಲ, ಶಿಕ್ಷೆಯೂ ಇಲ್ಲ
ಕಪಟಿಗಳ ಉಪಟಳವೂ ಇಲ್ಲ……….
ಬೆನ್ನಿಗೆ ಚೂರಿ ಹಾಕುವವರು ಇಲ್ಲ
ಹೃದಯಕ್ಕೆ ಇರಿಯುವವರೂ ಇಲ್ಲ,
ನಿನಗೆ ನೀನೇ ರಾಜ ನೀನೇ, ಸಾಮ್ರಾಟ ನೀನೇ ಚಕ್ರವರ್ತಿ
ನಿಮ್ಮ ಬದುಕು ನಿಮ್ಮ ಆಯ್ಕೆ………
ಆನಾಗರೀಕರನ್ನು ತೊರೆದು ಬನ್ನಿ,
ಆತ್ಮವಂಚಕರನ್ನು ಬಿಟ್ಟು ಬನ್ನಿ,
ಹೊಸ ನಾಗರೀಕ ಜಗತ್ತಿಗೆ ಕರೆದೊಯ್ಯುವೆ ಬನ್ನಿ…..,..
ಬನ್ನಿ ನೊಂದವರೆ ನನ್ನೊಂದಿಗೆ
ಸಪ್ತ ಸಾಗರದಾಚೆಯ ನಾಡಿಗೆ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……