ಕಾರ್ಮಿಕ ಇಲಾಖೆಯ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ: ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್

ವಿಜಯ ದರ್ಪಣ ನ್ಯೂಸ್….

ಕಾರ್ಮಿಕರ ಜಿಲ್ಲಾ ಮಟ್ಟದ ಕಾನೂನುಗಳ ಅರಿವು ಕಾರ್ಯಗಾರ

ಕಾರ್ಮಿಕ ಇಲಾಖೆಯ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ: ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್. 25, 2024 :- ಕಾರ್ಮಿಕರ ಶ್ರಮದಿಂದ ಸಮಾಜ ಸುವ್ಯವಸ್ಥಿತವಾಗಿ ನಡೆಯುತ್ತಿದೆ. ಅದೇ ರೀತಿಯಲ್ಲಿ ಕಾರ್ಮಿಕ ವರ್ಗದ ಕಲ್ಯಾಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳು, ಸೌಲಭ್ಯಗಳನ್ನು ಹಾಗೂ ಕಾನೂನುಗಳು ಜಾರಿಗೊಳಿಸಿದೆ. ಇದರ ಸದುಪಯೋಗವನ್ನು ಕಾರ್ಮಿಕರು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್ ಅವರು ಹೇಳಿದರು.


ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಕಾರ್ಖಾನೆಗಳು ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ಉದ್ಯೋಗಿಗಳ ರಾಜ್ಯ ವಿಮಾ ನಿಧಿ ಸಂಸ್ಥೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಾರ್ವಜನಿಕರು, ಉದ್ಯೋಗದಾತರು ಹಾಗೂ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಿಗೆ
ಅನುಷ್ಠಾನಗೊಳಿಸಲಾಗುತ್ತಿರುವ ಯೋಜನೆ/ಕಾನೂನುಗಳ ಅರಿವು ಹಾಗೂ ಅಭಿಪ್ರಾಯ ಸಂಗ್ರಹ ಸಂಬಂಧಿತ ‘ಜಿಲ್ಲಾ ಮಟ್ಟದ ಕಾನೂನು ಅರಿವು ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಅನೇಕ ಕೈಗಾರಿಕೆ ಸಂಸ್ಥೆಗಳು ಹಾಗೂ ಕಾರ್ಖಾನೆಗಳು ಸ್ಥಾಪನೆಗೊಂಡಿದ್ದು, ಸಾವಿರಾರು ಜನರಿಗೆ ಉದ್ಯೋಗವನ್ನು ಪಡೆದುಕೊಂಡು ನೂರಾರು ಕುಟುಂಬದವರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂದರು.

ಬೆಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಾದ ಜಹೀರ್ ಬಾಷ ಅವರು ಮಾತನಾಡಿ, ಕಾರ್ಖಾನೆ ಹಾಗೂ ಕೈಗಾರಿಕೆಗಳಲ್ಲಿ ಮತ್ತು ಕಟ್ಟಡ ನಿರ್ಮಾಣದಲ್ಲಿ ಕಾರ್ಮಿಕರು ತಮ್ಮ ಸುರಕ್ಷತೆಯನ್ನು ವಹಿಸಬೇಕು. ಸರ್ಕಾರ ಕಾರ್ಮಿಕ ಇಲಾಖೆ ಮೂಲಕ ಸಾಕಷ್ಟು ಯೋಜನೆಗಳು ಹಾಗೂ ಕಾನೂನುಗಳನ್ನು ಜಾರಿಗೆ ತಂದು ಕಾರ್ಮಿಕ ವರ್ಗದವರ ಕಲ್ಯಾಣ ಮಾಡಲಾಗುತ್ತಿದೆ ಎಂದು ಹೇಳಿದರು.

ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಬಿಸ್ಸೆ ಇಂಡಿಯಾ ಮತ್ತು ಕೈಗಾರಿಕಾ ಬಾಂಧವ್ಯ ವೃತ್ತಿಪರ ಕೇಂದ್ರದ ಹೆಚ್.ಆರ್ ಶೇಖರ್ ಗಣಗಲೂರೂ ಅವರು ಪ್ರಮುಖ ಕಾರ್ಮಿಕ ಕಾನೂನುಗಳ ಕುರಿತು ಉಪನ್ಯಾಸ, ಪಿಎಫ್ ಆಯುಕ್ತ ರಾಮಕೃಷ್ಣನ್ ಅವರು ದಿ ಎಂಪ್ಲಾಯಿಸ್ ಪ್ರೋವಿಡೆಂಟ್ ಫಂಡ್ ಮತ್ತು ಪಬ್ಲಿಕ್ ಪ್ರೋವಿಡೆಂಟ್ ಫಂಡ್ ವಿಷಯ ಕುರಿತು ಉಪನ್ಯಾಸ, ಯಲಹಂಕ ಇಎಸ್ಐ ಶಾಖಾ ವ್ಯವಸ್ಥಾಪಕ ಅಕ್ಷತಾ ರಾವ್ ಅವರು ದಿ ಎಂಪ್ಲಾಯಿಸ್ ಸ್ಟೇಟ್ ಇನ್ಸುರೇನ್ಸ್ (ಇಎಸ್ಐ), ಎ ಸೋಸಿಯಲ್ ಸೆಕ್ಯುರಿಟಿ ಸ್ಕಿಂ ವಿಷಯ ಕುರಿತು ಉಪನ್ಯಾಸ, ಕಾರ್ಖಾನೆಗಳು ಬಾಯ್ಲರುಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ಉಪ ನಿರ್ದೇಶಕ ಎಂ.ಎ ಸೋಮಶೇಖರ್, ತಿಮ್ಮರಾಜು ವಿ ಅವರು ವೇತನ ಸಂದಾಯ ಕಾಯ್ದೆ, ಪ್ರಸ್ತೂತಿ ಸೌಕರ್ಯ ಕಾಯ್ದೆ ಹಾಗೂ ಕಾರ್ಖಾನೆಗಳಲ್ಲಿ ಮತ್ತು ಕಟ್ಟಡ ನಿರ್ಮಾಣದಲ್ಲಿ ಕಾರ್ಮಿಕರ ಸುರಕ್ಷತೆ ವಿಷಯ ಕುರಿತು ಕೈಗಾರಿಕೆಗಳ ಮುಖ್ಯಸ್ಥರು ಹಾಗೂ ಕಾರ್ಮಿಕರ ಜತೆಯಲ್ಲಿ ಸಂವಾದವನ್ನು ನಡೆಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಹರ್ಷವರ್ಧನ್ ಎಸ್.ಎಲ್, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ನಿರ್ದೇಶಕ ಸುಬ್ಬರಾವ್ ಎಸ್, ಜಿಲ್ಲೆಯ ನಾಲ್ಕು ತಾಲೂಕು ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಕೈಗಾರಿಕೆಗಳ ಮುುಖ್ಯಸ್ಥರು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.