ಪತ್ರಿಕಾ ವಿತರಕರೇ ಪತ್ರಿಕೋದ್ಯಮ ನರಮಂಡಲ: ಕೆ.ವಿ.ಪ್ರಭಾಕರ್

ವಿಜಯ ದರ್ಪಣ ನ್ಯೂಸ್…

ಚಿತ್ರದುರ್ಗದಲ್ಲಿ ರಾಜ್ಯ ಮಟ್ಟದ ಪತ್ರಿಕಾ ವಿತರಕರ ಸಮಾವೇಶ ಉದ್ಘಾಟನೆ

ಪತ್ರಿಕಾ ವಿತರಕರೇ ಪತ್ರಿಕೋದ್ಯಮ ನರಮಂಡಲ: ಕೆ.ವಿ.ಪ್ರಭಾಕರ್

ಚಿತ್ರದುರ್ಗ ಸೆ 8:
ಪತ್ರಿಕಾ ವಿತರಕರೇ ಪತ್ರಿಕೋದ್ಯಮ ನರಮಂಡಲ ಎಂದು ಕೆ.ವಿ.ಪ್ರಭಾಕರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟವು ಆಯೋಜಿಸಿದ್ದ ಪತ್ರಿಕಾ ವಿತರಕರ ನಾಲ್ಕನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಹೃದಯಕ್ಕೆ, ಮೆದುಳಿಗೆ ರಕ್ತ ಆಕ್ಸಿಜನ್ ಸಪ್ಲೈ ಮಾಡೋದು ಈ ನರಮಂಡಲವೇ. ಹೀಗೆ ಪತ್ರಿಕೋದ್ಯಮದ ನರಮಂಡಲ ಪತ್ರಿಕಾ ವಿತರಕರು ಎಂದರು.

ನ್ಯೂಸ್ ರೂಮಲ್ಲಿ ಲೇಔಟ್ ಆಗಿ, ಪ್ರಿಂಟಿಂಗ್ ಪ್ರೆಸ್ ನಲ್ಲಿ ಮುದ್ರಣವಾಗುವ ಪತ್ರಿಕೆಗಳನ್ನು ರಾಜ್ಯದ ಮೂಲೆ ಮೂಲೆಯಲ್ಲಿರುವ ಓದುಗರ ಮನೆ ಬಾಗಿಲಿಗೆ ತಲುಪಿಸಲು ಪತ್ರಿಕಾ ವಿರತಕರ ನರ ಮಂಡಲ ವ್ಯವಸ್ಥಿತವಾಗಿರಬೇಕು. ನ್ಯೂಸ್ ರೂಮುಗಳು ಎಷ್ಟೇ ಹೈಟೆಕ್ ಆಗಿದ್ದರೂ, ಪ್ರಿಂಟಿಂಗ್ ಪ್ರೆಸ್ ಗಳು ಎಷ್ಟೇ ಅಡ್ವಾನ್ಸ್ ಆಗಿದ್ದರೂ ಪತ್ರಿಕಾ ವಿತರಕರ ನರಮಂಡಲ ಸರಿಯಾಗಿ ಇಲ್ಲ ಅಂದರೆ ಪ್ರಯೋಜನವಿಲ್ಲ ಎಂದು ವಿಶ್ಲೇಷಿಸಿದರು.

ಪತ್ರಿಕಾ ವಿತರಕರು ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹಿನ್ನಲೆಯುಳ್ಳವರಾಗಿದ್ದು, ವಿದ್ಯಾರ್ಥಿಗಳಿಂದ ವಯಸ್ಕರವರೆಗೂ ಪ್ರತಿನಿತ್ಯ ಸೂರ್ಯ ಉದಯಿಸುವ ಮೊದಲೇ ಚಳಿ, ಮಳೆ ಎನ್ನದೆ ಪತ್ರಿಕೆಯನ್ನು ಮನೆ ಮನೆ ತಲುಪಿಸುತ್ತಾರೆ. ಅವರ ಸೇವೆ ಶ್ಲಾಘನೀಯ ಎಂದರು.

ಪತ್ರಿಕೆ ವಿತರಕ ವಿದ್ಯಾರ್ಥಿಗಳು ಓದಿನ ಜೊತೆಗೆ ದುಡಿಮೆಯಲ್ಲೂ ತೊಡಗುತ್ತಾರೆ. ಇದು ಅವರ ಕುಟುಂಬಕ್ಕೆ ಮತ್ತು ನಾಡಿನ ಆರ್ಥಿಕತೆಗೂ ಅವರ ಪಾಲಿನ ಕೊಡುಗೆ ಕೊಟ್ಟಂತೆ ಎಂದರು.

ಪತ್ರಿಕೆ ವಿತರಕರ ಸಮಗ್ರ ಕಲ್ಯಾಣಕ್ಕೆ ಪ್ರತ್ಯೇಕ ನಿಧಿ ಸ್ಥಾಪನೆ ಮಾಡಬೇಕು. ಉಚಿತ ಪಡಿತರ, ವಿದ್ಯಾರ್ಥಿ ವೇತನ ನೀಡಬೇಕು. ಜೀವವಿಮೆ, ಹೆಲ್ತ್ ಕಾರ್ಡ್ ನೀಡಬೇಕು. ಬೈಕ್/ ಸೈಕಲ್ ಖರೀದಿಸಲು ಶೇ.50 ರಷ್ಟು ರಿಯಾಯ್ತಿ ಒದಗಿಸಬೇಕು, ಜರ್ಕೀನ್ ಗಳನ್ನು ಒದಗಿಸಬೇಕು. ಜೀವ ವಿಮೆ ಮಾಡಿಸಿಕೊಡಬೇಕು ಎನ್ನುವ ಬಹು ವರ್ಷಗಳ ಬೇಡಿಕೆಗಳಿವೆ. ಎಲ್ಲವನ್ನೂ ಸರ್ಕಾರವೇ ನೇರವಾಗಿ ಒದಗಿಸುವುದು ಕಷ್ಟ. ಹೀಗಾಗಿ ಮಾಧ್ಯಮ‌ ಸಂಸ್ಥೆಗಳು ಖಾಸಗಿ ಕಂಪನಿಗಳ ಸಹಯೋಗದಲ್ಲಿ CSR fund ಬಳಸಿಕೊಂಡು ಈ ಬೇಡಿಕೆಗಳಲ್ಲಿ ಬಹಳಷ್ಟನ್ನು ಈಡೇರಿಸಬಹುದು ಎಂದರು.

ನಾನೂ ಕೂಡ ಮಾಧ್ಯಮ ಸಂಸ್ಥೆಗಳು, ಸರ್ಕಾರ ಮತ್ತು ಖಾಸಗಿ ಕಂಪನಿಗಳ ಸಹಯೋಗದಲ್ಲಿ CSR Fund ನೆರವಿನಿಂದ ಏನೆಲ್ಲಾ ಮಾಡಬಹುದು ಎನ್ನುವ ಬಗ್ಗೆ plan ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಇವೆಲ್ಲಾ ಸಾಕಾರಗೊಳ್ಳಬಹುದು ಎನ್ನುವ ನಿರೀಕ್ಷೆ ಇದೆ ಎಂದರು.

ತರಳಬಾಳು ಶ್ರೀಗಳಾದ ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಬೋವಿ ಮಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳ ದಿವ್ಯ ಸಾನಿದ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ, ವಿಆರ್ ಎಲ್ ಸಮೂಹ ಸಂಸ್ಥೆಗಳ ಮಾಲೀಕ ವಿಜಯ ಸಂಕೇಶ್ವರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾ ಉಸ್ತುವಾರಿ ಸಚಿವ ಸುದಾಕರ್, ಸಂಸದ ಗೋವಿಂದ ಕಾರಜೋಳ, ಶಾಸಕರು , ಹಿರಿಯ ಪತ್ರಕರ್ತರಾದ ಪ್ರಜಾಪ್ರಗತಿ ನಾಗಣ್ಣ, ಬಿ.ವಿ.ಮಲ್ಲಿಕಾರ್ಜುನಯ್ಯ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜವರಪ್ಪ,
ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಶಂಭುಲಿಂಗ, ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.