ಅಂತರರಾಷ್ಟ್ರೀಯ ಯೋಗ ದಿನ 2024: ಸದ್ಗುರು ಆದಿಯೋಗಿ ಸನ್ನಿಧಿಯಲ್ಲಿ ಯೋಗ ದಿನಾಚರಣೆ ಆಚರಣೆ

ವಿಜಯ ದರ್ಪಣ ನ್ಯೂಸ್…

ಸದ್ಗುರುಆದಿಯೋಗೀ ಕ್ಷೇತ್ರ  ಚಿಕ್ಕಬಳ್ಳಾಪುರ ಜೂನ್ 21: ಅಂತರರಾಷ್ಟ್ರೀಯ ಯೋಗ ದಿನ 2024: ಸದ್ಗುರು ಸನ್ನಿಧಿ ಚಿಕ್ಕಬಳ್ಳಾಪುರದ ಆದಿಯೋಗಿ ಸಮ್ಮುಖದಲ್ಲಿ ಸುಮಾರು 1,000 ಎನ್‌ಸಿಸಿ ಕೆಡೆಟ್‌ಗಳು, ಸೈನಿಕರು, ಮದ್ರಾಸ್ ಸ್ಯಾಪರ್ಸ್, ಬಿಎಸ್‌ಎಫ್, ಸ್ಥಳೀಯ ಗ್ರಾಮಸ್ಥರು ಯೋಗಾಭ್ಯಾಸ ಮಾಡಿದರು

21 ಜೂನ್ 2024: ಸದ್ಗುರು ಸನ್ನಿಧಿ ಚಿಕ್ಕಬಳ್ಳಾಪುರದ ಆದಿಯೋಗಿಯ ಸಮ್ಮುಖದಲ್ಲಿ ಜೂನ್ 21 ರಂದು 10ನೇ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಬೃಹತ್ ಯೋಗ ಕಾರ್ಯಕ್ರಮ ನಡೆಯಿತು.

ಏರ್ ಕಮೋಡೋರ್ ಎಸ್.ಬಿ.ಅರುಣ್ ಕುಮಾರ್ ವಿಎಸ್‌ಎಂ, ಡೆಪ್ಯುಟಿ ಡೈರೆಕ್ಟರ್ ಜನರಲ್, ಕರ್ನಾಟಕ ಮತ್ತು ಗೋವಾ ಏನ್ ಸಿಸಿ ಡೈರೆಕ್ಟರೇಟ್ ಮತ್ತು ಪ್ರಸಿದ್ದ ನಟಿ ಹಾಗು ಮಾಡೆಲ್ ಶ್ರೀನಿಧಿ ಶೆಟ್ಟಿ ಅವರುಗಳು ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದರು.

ಚಿಕ್ಕಬಳ್ಳಾಪುರದ 20 ಕಾಲೇಜುಗಳ 5 ಕರ್ನಾಟಕ ಬೆಟಾಲಿಯನ್‌ನ ಸುಮಾರು 1,000 ಎನ್‌ಸಿಸಿ ಕೆಡೆಟ್‌ಗಳು, ಭಾರತೀಯ ಸೇನೆಯ ಮದ್ರಾಸ್ ಇಂಜಿನಿಯರಿಂಗ್ ಕೋರ್ (ಎಂಇಜಿ)ನ 200 ಸೈನಿಕರು, ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯ ಉಪ ತರಬೇತಿ ಕೇಂದ್ರ (ಎಸ್‌ಸಿ)ದ 120 ಜವಾನರು ಮತ್ತು 2 ಅಧಿಕಾರಿಗಳು ಆದಿಯೋಗಿಯ ಸಮ್ಮುಖದಲ್ಲಿ ಈಶ ಹಠಯೋಗ ಶಿಕ್ಷಕರು ನಡೆಸಿದ ಯೋಗ ಸೆಷನ್ ಗಳಲ್ಲಿ ಪಾಲ್ಗೊಂಡರು.

ಏರ್ ಕಾಮೋಡರ್ ಎಸ್ ಬಿ ಅರುಣ್ ಕುಮಾರ್ ಅವರು ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ದೇಶದ ಎಲ್ಲ ಜನರೂ, ಮುಖ್ಯವಾಗಿ ಯುವಪೀಳಿಗೆ ಯೋಗವನ್ನು ತಮ್ಮ ಜೀವನಶೈಲಿಯನ್ನಾಗಿ ಅಳವಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಯೋಗ ಕೇವಲ ಶಾರೀರಿಕ ವ್ಯಾಯಾಮವಲ್ಲ, ಬದಲಿಗೆ ದೇಹ ಮತ್ತು ಮನಸ್ಸನ್ನು ಪುನಶ್ಚತನಗೊಳಿಸುವ ಒಂದು ಪರಿಪೂರ್ಣ ಅಭ್ಯಾಸ ಎಂದು ಅವರು ಹೇಳಿದರು. ತಮ್ಮ ಮಾತನ್ನು ಮುಂದುವರೆಸುತ್ತಾ “ಜಗತ್ತಿನೆಲ್ಲೆಡೆ ನಾವೆಲ್ಲರೂ ಒಬ್ಬರಿಗೊಬ್ಬರು ಬೆಸೆದುಕೊಂಡಿದ್ದೇವೆ ಮತ್ತು ಯೋಗದ ಮೂಲಕ, ನಾವು ನಮ್ಮಲ್ಲಿನ ತಡೆಗೋಡೆಗಳನ್ನು ಮುರಿದು, ವಿಶ್ವವನ್ನೇ ಒಂದು ಕುಟುಂಬವನ್ನಾಗಿ ಮಾಡಬಹುದು” ಎಂದರು.

“ಯೋಗ, ಶಿಸ್ತು ಮತ್ತು ಏಕಾಗ್ರತೆಯನ್ನು ತರುತ್ತದೆ” ಎಂದ ಅವರು, ವಿದ್ಯಾರ್ಥಿ ಮತ್ತು ಎನ್ ಸಿ ಸಿ ಪಡೆಗೆ ಈ ಅಭ್ಯಾಸಗಳನ್ನು ಅಳವಡಿಸಿಕೊಂಡರೆ, ತಮ್ಮೆಲ್ಲ ಚಟುವಟಿಕೆಗಳಲ್ಲಿ ಸಹಾಯವಾಗುತ್ತದೆ ಎಂದು ಬುದ್ಧಿಮಾತು ಹೇಳಿದರು.

ಕೆಜಿಎಫ್ ಸಿನೆಮಾದ ಜನಪ್ರಿಯ ನಟಿ ಶ್ರೀನಿಧಿ ಶೆಟ್ಟಿಯವರು, “ಏನು ಸರಿ, ಏನು ತಪ್ಪು, ಏನು ಮಾಡಬೇಕು, ಏನು ಮಾಡಬಾರದು ಎಂಬುದು ನಮಗೆಲ್ಲರಿಗೂ ತಿಳಿದಿದೆ… ನಾವು ಕೇವಲ ಕಾರ್ಯ ಕಾಲ್ಗೊಳ್ಳಬೇಕು ಅಷ್ಟೇ ” ಎಂದರು.

ಪರಿಸರ ಮಾಲಿನ್ಯದಿಂದಾಗಿ, ಜನರು ತಮ್ಮ ಆರೋಗ್ಯ ಮತ್ತು ಯೋಗಕ್ಷೇಮ ಹೆಚ್ಚಿಸಲು ಆಂತರಿಕವಾಗಿ ತಿರುಗುವುದು ಅನಿವಾರ್ಯ. “ನಾವು ಉಸಿರಾಡುವ ಗಾಳಿ, ನಡೆಯುವ ಮಣ್ಣು, ಕುಡಿಯುವ ನೀರು, ಎಲ್ಲವೂ ಕ್ಷೀಣಿಸಿದೆ.” ‘ಆಂತರಿಕವಾಗಿ ಆನಂದದಿಂದಿರಲು’ ಯೋಗದ ನಿಯಮಿತ ಅಭ್ಯಾಸವನ್ನು ಕೈಗೊಳ್ಳುವಂತೆ ಜನರಲ್ಲಿ ಕೇಳಿಕೊಂಡರು.

ಏರ್ ಕಮೋಡೋರ್ ಎಸ್‌ಬಿ ಅರುಣ್‌ಕುಮಾರ್ ಅವರು ಸದ್ಗುರು ಸನ್ನಿಧಿಯಲ್ಲಿರುವ ಸಮುದಾಯ ಯೋಗ ಹಾಲ್ ಅನ್ನು ವರ್ಚುವಲ್ ಆಗಿ ಉದ್ಘಾಟಿಸಿದರು. ಇಂದಿನಿಂದ ಈ ಹಾಲ್ ನಲ್ಲಿ ಸಾರ್ವಜನಿಕರಿಗೆ ಪ್ರತಿದಿನ ಉಚಿತ ಯೋಗ ಸೆಷನ್ ನಡೆಸಲಾಗುವುದು. ಈಶದ ಹಠ ಯೋಗ ಶಿಕ್ಷಕರು ಪ್ರತಿದಿನ ವರ್ಷಪೂರ್ತಿ ಬೆಳಿಗ್ಗೆ 10:30 ರಿಂದ ಸಂಜೆ 6:00 ರವರೆಗೆ 30 ನಿಮಿಷಗಳ ಸೆಷನ್ ನಡೆಸುತ್ತಾರೆ. ಈ ಸೆಷನ್ ಗಳು ಐದು ಭಾಷೆಗಳಲ್ಲಿ ನಡೆಸಲಾಗುತ್ತದೆ: ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲೀಷ್ 

ಯೋಗದ ಪರಿಣಾಮಕಾರಿ ಪ್ರಯೋಜನಗಳಲ್ಲಿ ಕೆಲವು: ಚೈತನ್ಯ, ಗಮನಶಕ್ತಿ ನೆನಪಿನ ಶಕ್ತಿ ಮತ್ತು ಕಾರ್ಯಕ್ಷಮತೆಯಲ್ಲಿ ಹೆಚ್ಚಳ. ದೇಹ, ಮನಸ್ಸು ಮತ್ತು ಭಾವನೆಗಳಲ್ಲಿ ಸ್ಥಿರತೆ . ಬೆನ್ನು ನೋವು, ಒತ್ತಡ, ಆತಂಕ ಮತ್ತು ಉದ್ವೇಗದ ಮಟ್ಟದಲ್ಲಿ ಇಳಿಕೆ.

ಹೆಚ್ಚಿನ ಮಾಹಿತಿಗಾಗಿ: 080=47103311ಗೆ ಕರೆ ಮಾಡಿ ಅಥವಾ sadhguru.sannidi@ishafoundation. org ಗೆ ಇಮೇಲ್ ಮಾಡಿ.